ಫೇಸ್ಬುಕ್ ಎಂಬ ಮಾಯಾಜಾಲದ ಸೆಳೆತದಲ್ಲಿ ಸಿಕ್ಕಿರುವ ಯುವಜನಾಂಗ ಅದರಿಂದ ಸೃಷ್ಟಿಯಾಗುತ್ತಿರುವ ಸಮಸ್ಯೆಗಳ ಕುರಿತು ಕೂಡ ಅರಿತಿರುವುದು ಒಳಿತು.
ಡೆಹ್ರಾಡೂನ್ ನಗರದಲ್ಲಿ ವೃದ್ಧಾಶ್ರಮವನ್ನು ಸ್ಥಾಪಿಸಲು 9 ಕೋಟಿ ರೂಪಾಯಿಗಳ ಸಹಾಯ ಒದಗಿಸುತ್ತೇನೆ ಎಂದು ಮಹಿಳೆಯೊಬ್ಬಳಿಗೆ ಭರವಸೆ ನೀಡಿದ್ದ ಆಕೆಯ ಫೇಸ್ಬುಕ್ ಗೆಳೆಯ ಆಕೆಯಿಂದ ಬರೊಬ್ಬರಿ 1.30 ಕೋಟಿ ರೂಪಾಯಿಗಳನ್ನು ದೋಚಿದ್ದಾನೆ.
ಹಣವನ್ನು ಪಡೆಯುವ ಮುನ್ನ ಅದಕ್ಕೆ ತಗಲುವ ತೆರಿಗೆಯನ್ನು ಪಾವತಿಸುವಂತೆ ರಾಮ್ ವಿಹಾರ್ ನಿವಾಸಿಯಾಗಿರುವ ಪೀಡಿತೆ ಬೀನಾ ಬೋರ್ ಥಂಕುರ್ ಅವರ ಫೇಸ್ಬುಕ್ ಗೆಳೆಯ ಸೂಚನೆ ನೀಡಿದ. ಆತನನ್ನು ನಂಬಿದ ಆಕೆ ವ್ಯಕ್ತಿಯ ಮೋಸದ ಕುರಿತು ತಿಳಿಯುವ ಮೊದಲು ಆತ ನೀಡಿದ ಬೇರೆ, ಬೇರೆ ಬ್ಯಾಂಕ್ ಖಾತೆಗಳಿಗೆ ಒಟ್ಟು 1.30 ಕೋಟಿ ರೂಪಾಯಿಗಳನ್ನು ಡೆಪಾಸಿಟ್ ಮಾಡಿದ್ದಳು.
ಪೀಡಿತೆ ಪೋಲಿಸರಿಗೆ ನೀಡಿದ ದೂರಿನ ಪ್ರಕಾರ ಓಎನ್ಜಿಸಿ ಉದ್ಯೋಗಿಯ ಪತ್ನಿಯಾಗಿರುವ ಥಂಕುರ್ ರಿಚರ್ಡ್ ಅಂಡರಸನ್ ಎಂದು ತನ್ನನ್ನು ತಾನು ಪರಿಚಯಿಸಿಕೊಂಡ ವ್ಯಕ್ತಿಯೊಂದಿಗೆ ಕಳೆದ ನವೆಂಬರ್ ತಿಂಗಳಲ್ಲಿ ಫೇಸ್ಬುಕ್ ಮೂಲಕ ಸ್ನೇಹಿತೆಯಾಗಿದ್ದಳು. ಆಗಿಂದ ಅವರಿಬ್ಬರು ಫೋನ್ ಮೂಲಕ ಕೂಡ ಸಂಭಾಷಿಸುತ್ತಿದ್ದರು.
ಆಕೆಯ ಜತೆ ದೂರವಾಣಿಯಲ್ಲಿ ಮಾತನಾಡುತ್ತಿದ್ದ ವೇಳೆ ನಾನು ಭಾರತದ ಬಡ ಜನರಿಗೆ ಸಹಾಯ ಮಾಡಲು ಬಯಸುತ್ತೇನೆ ಎಂದ ಅಂಡರಸನ್, ಕೊನೆಗೆ ಆ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರಸ್ತಾವನೆಗಳನ್ನು ನೀಡಿದ ಮತ್ತು ಆಕೆಯಿಂದಲೂ ಸಲಹೆಗಳನ್ನು ಪಡೆದುಕೊಂಡ ಮತ್ತು ಆಕೆಯ ನಗರದಲ್ಲಿ ವೃದ್ಧಾಶ್ರಮ ಒಂದನ್ನು ಪ್ರಾರಂಭಿಸಲು 9 ಕೋಟಿ ರೂಪಾಯಿಗಳನ್ನು ಒದಗಿಸುತ್ತೇನೆ ಎಂದು ಭರವಸೆ ನೀಡಿದ. ತೆರಿಗೆ ಹಣವಾಗಿ ತನ್ನ ಖಾತೆಯಲ್ಲಿ ಹಣ ಪಾವತಿ ಮಾಡುವಂತೆ ಆತ ಹೇಳಿದ. ಆಕೆ 25 ಖಾತೆಗಳಲ್ಲಿ ಒಟ್ಟು 1. 30 ಕೋಟಿ ಹಣವನ್ನು ಹಾಕಿದಳು.
ತನಗೆ ಮೋಸವಾಗಿದೆ ಎಂಬ ಅರಿವಾಗುವಷ್ಟರಲ್ಲಿ ಆಕೆ ದೊಡ್ಡ ಮೊತ್ತದ ಹಣವನ್ನು ಕಳೆದುಕೊಂಡಾಗಿತ್ತು. ಆಕೆಯ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡಿರುವ ಪೋಲಿಸರಿಗೆ ಹೆಚ್ಚಿನ ಖಾತೆಗಳು ದಕ್ಷಿಣ ಭಾರತ (ಕೇರಳ, ತಮಿಳುನಾಡು, ಕರ್ನಾಟಕ) ದ್ದಾಗಿವೆ ಎಂದು ತಿಳಿದು ಬಂದಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.