ಗಂಡನನ್ನು ಕಳೆದುಕೊಂಡಿದ್ದ ಯುವತಿಯೊಬ್ಬಳು ತಾನು ಪ್ರೇಮಿಸುತ್ತಿದ್ದ ವ್ಯಕ್ತಿಯ ಜತೆ ಮದುವೆಯಾಗು ಎಂದು ಬಲವಂತ ಮಾಡಿದ್ದಕ್ಕೆ ಆಕೆಯನ್ನಾತ ಕೊಲೆಗೈದಿದ್ದಾನೆ. ಗುರುವಾರ ರಾತ್ರಿ ಸಿಂಗಾಪುರ ಲೇ ಔಟ್ನಲ್ಲಿ ಈ ಘಟನೆ ನಡೆದಿದೆ.
ಮೃತಳನ್ನು ಮಂಜುಳಾ(21) ಎಂದು ಗುರುತಿಸಲಾಗಿದ್ದು ಕಳೆದೆರಡು ವರ್ಷಗಳ ಹಿಂದೆ ಆಕೆ ಗಂಡನನ್ನು ಕಳೆದುಕೊಂಡಿದ್ದಳು. ತಾಯಿಯ ಜತೆ ವಾಸವಾಗಿದ್ದ ಆಕೆಗೆ ನಾಗರಾಜು ಎನ್ನುವವನ ಪರಿಚಯವಾಗಿತ್ತು. ಒಂದು ವರ್ಷದಿಂದ ಅವರಿಬ್ಬರು ಜತೆಯಾಗಿ ವಾಸವಾಗಿದ್ದರು.
ತನ್ನ ಮಗಳನ್ನು ಮದುವೆಯಾಗುವಂತೆ ಮಂಜುಳಾ ತಾಯಿ ನಾಗರಾಜು ಮೇಲೆ ಒತ್ತಡ ಹೇರುತ್ತಿದ್ದಳು. ಆದರೆ ಆತನಿಗೆ ಆಕೆಯನ್ನು ವಿವಾಹವಾಗುವುದು ಇಷ್ಟವಿರಲಿಲ್ಲ.
ಮಂಜುಳಾ ಕೂಡ ತನ್ನನ್ನು ಮದುವೆಯಾಗುವಂತೆ ನಾಗರಾಜುವನ್ನು ಒತ್ತಾಯಿಸುತ್ತಿದ್ದಳು. ಆದರೆ ಏನೇನೋ ನೆಪ ಹೇಳಿ ಆತ ಮದುವೆಯನ್ನು ನಿರಾಕರಿಸುತ್ತಿದ್ದ. ಇದೇ ವಿಚಾರಕ್ಕೆ ನಾಗರಾಜು ಮತ್ತು ಮಂಜುಳಾ ನಡುವೆ ಜಗಳವಾಗುತ್ತಿತ್ತು.
ತಾಯಿ ಮಗಳು ಒತ್ತಡ ಹೇರುತ್ತಿದ್ದರಿಂದ ರೋಷಿ ಹೋಗಿದ್ದ ನಾಗರಾಜು ಗುರುವಾರ ರಾತ್ರಿ ಮಂಜುಳಾಳ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ.
ಆತನೀಗ ವಿದ್ಯಾರಣ್ಯಪುರ ಪೊಲೀಸರ ವಶದಲ್ಲಿದ್ದಾನೆ.