ಅಪರಾಧಿಗಳು ದೊಡ್ಡವರಾಗಿರಲಿ ಅಥವಾ ಸಣ್ಣವರಾಗಿರಲಿ ಅವರ ಬೆನ್ನು ಹತ್ತುತ್ತೇವೆ. ಆದರೆ ವಿದೇಶಿ ಖಾತೆದಾರರ ಬಗ್ಗೆ ಗೋಪ್ಯತೆ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ಕಪ್ಪು ಹಣದ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಸ್ಪಷ್ಟಪಡಿಸಿದೆ.
ಸರ್ಕಾರ ಸುಪ್ರೀಂಕೋರ್ಟ್ಗೆ ನೀಡಿದ 600 ಖಾತೆದಾರರ ಪಟ್ಟಿಗಿಂತ ಇನ್ನಷ್ಟು ಹೆಚ್ಚು ಹೆಸರುಗಳನ್ನು ಸಂಗ್ರಹಿಸುತ್ತಿರುವುದಾಗಿ ಅದು ತಿಳಿಸಿದೆ. ನಮ್ಮ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ. ಎಲ್ಲರೂ ಸಮಾನರು, ದೇಶವನ್ನು ಯಾರೇ ಲೂಟಿ ಮಾಡಿದ್ದರೂ ಅವರನ್ನು ಸೆರೆಹಿಡಿದು ಶಿಕ್ಷಿಸುತ್ತೇವೆ ಎಂದು ಹೇಳಿದೆ.
ಅನೇಕ ಜನರಿಗೆ ನಮ್ಮ ಕೆಲಸ ಅಹಿತಕಾರಿಯಾಗಿ ಕಂಡರೂ ನಾವು ಕಪ್ಪು ಹಣ ಖದೀಮರಿಗೆ ಶಿಕ್ಷಿಸುವ ಕೆಲಸ ನೆರವೇರಿಸುವುದಾಗಿ ಭರವಸೆ ನೀಡುತ್ತೇವೆ ಎಂದು ಎಸ್ಐಟಿ ಉಪಾಧ್ಯಕ್ಷ ನ್ಯಾ. ಅರಿಜಿತ್ ಪಸಾಯತ್ ಹೇಳಿದರು. ಗೋಪ್ಯತೆ ಕಾಪಾಡುವುದು ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದು, ಒಪ್ಪಂದವನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ನಾವು ಉಲ್ಲಂಘಿಸಿದರೆ ಮತ್ತಷ್ಟು ಮಾಹಿತಿಯನ್ನು ಬ್ಯಾಂಕ್ಗಳು ನೀಡುವುದಿಲ್ಲ ಎಂದರು. ವಿದೇಶದಲ್ಲಿ ಕಪ್ಪು ಹಣ ಇಟ್ಟಿರುವ ಆರೋಪಿಗಳ ಬಗ್ಗೆ ತನಿಖೆ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಅವರ ವಿರುದ್ಧ ಅಗತ್ಯ ಕ್ರಮವನ್ನು ಕೈಗೊಳ್ಳುತ್ತೇವೆ ಎಂದೂ ನುಡಿದರು.