ದೆಹಲಿಯ ಮಾಜಿ ಮುಖ್ಯಮಂತ್ರಿ, ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಇಂದು ಉತ್ತರಪ್ರದೇಶದ ವಾರಣಾಸಿಯಿಂದ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭರ್ಜರಿ ರೋಡ್ ಶೋ ನಡೆಸಿ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಚುನಾವಣಾ ಅಧಿಕಾರಿಗಳಿಗೆ ಅವರು ತಮ್ಮ ನಾಮಪತ್ರವನ್ನು ನೀಡಲಿದ್ದಾರೆ. ನಿನ್ನೆ ಅಮೇಥಿಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಕುಮಾರ್ ವಿಶ್ವಾಸ್ ಪರ ಪ್ರಚಾರ ನಡೆಸಿ ಇಂದು ಬೆಳಿಗ್ಗೆ ಅವರು ವಾರಣಾಸಿಯನ್ನು ತಲುಪಿದ್ದಾರೆ.
ಅವರ ಪ್ರತಿಸ್ಪರ್ಧಿಯಾಗಿರುವ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಸಹ ನಾಳೆ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ಧಾರ್ಮಿಕವಾಗಿ ಪ್ರಸಿದ್ಧವಾಗಿರುವ ಕಾಶಿ ವಿಶ್ವನಾಥನ ಕ್ಷೇತ್ರ ಪ್ರಸ್ತುತ ರಾಜಕೀಯ ಕಾರಣಕ್ಕಾಗಿ ಇಡೀ ವಿಶ್ವದ ಗಮನ ಸೆಳೆದಿದೆ. ಘಟಾನುಘಟಿಗಳ ನಡುವಿನ ಜಿದ್ದಾಜಿದ್ದಿನ ಕಾಳಗಕ್ಕೆ ದೇವನಗರಿ ಸಾಕ್ಷಿಯಾಗಲಿದೆ.
ಲೋಕಸಭಾ ಚುನಾವಣಾ ಮಹಾಯುದ್ಧದ ಅಂತಿಮ ಚರಣದಲ್ಲಿ ಮೇ 12 ರಂದು ಇಲ್ಲಿ ಚುನಾವಣೆ ನಡೆಯಲಿದೆ.