ಸುಪ್ರೀಂಕೋರ್ಟ್ ಹಾಲ್ನಲ್ಲಿ ವಕೀಲರೊಬ್ಬರು ವಂದೇಮಾತರಂ ಘೋಷಣೆ ಕೂಗಿದ ಘಟನೆ ಸಂಭವಿಸಿದೆ. ಆ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದರು. ಪಾಟಿಯಾಲಾ ಹೌಸ್ ಕೋರ್ಟ್ ಆವರಣದಲ್ಲಿ ನಡೆದ ಘರ್ಷಣೆ ಕುರಿತು ವಿಚಾರಣೆ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಪ್ರತಿವಾದಿಗಳ ಪರ ವಕೀಲ ವಾದ ಮಂಡಿಸುವ ಸಂದರ್ಭದಲ್ಲಿ ಅಲ್ಲಿದ್ದ ವಕೀಲ ರಾಜೀವ್ ಯಾದವ್ ವಂದೇಮಾತರಂ ಘೋಷಣೆ ಕೂಗಿದಾಗ ನ್ಯಾಯಮೂರ್ತಿಗಳು ಯಾರು ಘೋಷಣೆ ಕೂಗಿದ್ದೆಂದು ವಿಚಾರಿಸಿ ಅವರನ್ನು ವಶಕ್ಕೆ ಪಡೆಯುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ವಕೀಲ ರಾಜೀವ್ ಯಾದವ್ ನ್ಯಾಯಮೂರ್ತಿಗಳ ಕ್ಷಮೆ ಕೋರಿ ತಾವು ಮುಂದೆ ಈ ರೀತಿ ವರ್ತಿಸುವುದಿಲ್ಲವೆಂದು ತಿಳಿಸಿದರು.
ಪಾಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿ ವಕೀಲರು ಪತ್ರಕರ್ತರು ಮತ್ತು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದರು ಮತ್ತು ದೆಹಲಿ ಬಿಜೆಪಿ ಶಾಸಕರೊಬ್ಬರು ಸಿಪಿಐ ಸದಸ್ಯರೊಬ್ಬರ ಮೇಲೆ ಹಲ್ಲೆ ಮಾಡಿದ್ದರು.
ಕೋರ್ಟ್ ಆವರಣದಲ್ಲಿ ಸಂಭವಿಸಿದ ಹಿಂಸಾಚಾರ ಕುರಿತು ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಪಟ್ಟಿ ಮಾಡಿತ್ತು. ದಾಳಿಯಲ್ಲಿ ಗಾಯಗೊಂಡಿದ್ದ ಜೆಎನ್ಯು ಹಿರಿಯ ವಿದ್ಯಾರ್ಥಿ ಜೈಪ್ರಕಾಶ್ ಈ ಕುರಿತು ಅರ್ಜಿ ಸಲ್ಲಿಸಿ ಜೆಎನ್ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕನ್ನಯ್ಯ ಕುಮಾರ್ ಸುರಕ್ಷತೆಯನ್ನು ಖಾತರಿಪಡಿಸುವಂತೆ ನಿರ್ದೇಶನ ನೀಡಬೇಕೆಂದು ಕೋರ್ಟ್ಗೆ ಕೋರಿದ್ದರು.