ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಮಹಾತ್ಮಾ ಗಾಂಧಿಯಂತೆ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಸುಭಾಷ್ ಚಂದ್ರ ಬೋಸ್ರಂತೆ ಎಂದು ಆರ್ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಹೋಲಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದ ಕುಮಾರ್, "ನರೇಂದ್ರ ಮೋದಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಇಬ್ಬರೂ ಸಮಾನರೇ. ಒಬ್ಬರು ಮಹಾತ್ಮಾ ಗಾಂಧಿ ತರಹ, ಇನ್ನೊಬ್ಬರು ಸುಭಾಷ್ ಚಂದ್ರ ಬೋಸ್ರವರ ತರಹ" ಎಂದು ಹೇಳಿದ್ದಾರೆ.
"ಸಂಪೂರ್ಣ ರಾಷ್ಟ್ರೀಯತೆಯ ಜಾತ್ಯತೀತತೆ" ಯನ್ನು ಅನುಸರಿಸಿದ ಮೋದಿ ಮತ್ತು ವಾಜಪೇಯಿ ಇಬ್ಬರೂ ಸಮಾನರು" ಎಂದವರು ಅಭಿಪ್ರಾಯ ಪಟ್ಟರು.
ಉತ್ತರಪ್ರದೇಶದಲ್ಲಿ ಬಿಜೆಪಿ ಪರ ಹೆಚ್ಚಿನ ಮತವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಿ ಆರ್ಎಸ್ಎಸ್ ಇಲ್ಲಿ ಪ್ರಚಾರದ ನೇತೃತ್ವದ ವಹಿಸಿದೆ ಎಂದು ಅವರು ಹೇಳಿದರು.
"ಉತ್ತರಪ್ರದೇಶದಲ್ಲಿ 100 ಪ್ರತಿಶತ ಮತದಾನವಾಗಬೇಕೆಂಬ ಉದ್ದೇಶದಿಂದ ನಾವು ಇಲ್ಲಿ ಪ್ರಚಾರವನ್ನು ಕೈಗೊಂಡಿದ್ದೇವೆ. ಸರಿಯಾದ ಆಯ್ಕೆಯನ್ನು ಮಾಡಿ ಎಂದು ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ" ಎಂದರು.
"ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ್ದುದನ್ನು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ವಿರೋಧಿಸಿಲ್ಲ, ಆದರೆ ಪ್ರಕಟಣೆ ಮಾಡಿದ ಸಮಯದ ಬಗ್ಗೆಯಷ್ಟೇ ಅವರ ಆಕ್ಷೇಪವಿತ್ತು. ಇದನ್ನು ಚುನಾವಣೆ ನಂತರ ಅಥವಾ ಮೊದಲೇ ಘೋಷಿಸುವುದು ಎನ್ನುವ ಕುರಿತು ಭಿನ್ನಾಭಿಪ್ರಾಯಗಳಿದ್ದವು" ಎಂದು ಅವರು ಹೇಳಿದರು.
"ಆರ್ಎಸ್ಎಸ್ನ್ನು ಟೀಕಿಸುವವರನ್ನು"ಮೂರ್ಖರು" ಎಂದು ಜರಿದ ಅವರು ಸಂಘ, ಕೋಮು ರಾಜಕೀಯಕ್ಕೆ ಎಂದಿಗೂ ಅನುಮೋದನೆ ನೀಡಿಲ್ಲ, ಬದಲಾಗಿ ರಾಷ್ಟ್ರೀಯತೆ, ಮಾನವೀಯ ಕಾರಣಗಳಿಗೆ ಸಂಘ ಕೆಲಸ ಮಾಡುತ್ತಿದೆ" ಎಂದು ತಿಳಿಸಿದರು.