ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿತನಾದ ನೋಯ್ಡಾದ ಮುಖ್ಯ ಇಂಜಿನಿಯರ್ ಯಾದವ್ ಸಿಂಗ್, ಕಳೆದ 2008ರಿಂದ 2014ರವರೆಗೆ ಅಂದಾಜು 100 ಕೋಟಿ ರೂಪಾಯಿಗಳಷ್ಟು ಲಂಚ ಪಡೆದಿದ್ದಾನೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭ್ರಷ್ಟಾಚಾರ ಹಗರಣ ಬಯಲಿಗೆ ಬಂದ ಹಿನ್ನೆಲೆಯಲ್ಲಿ ಪ್ರೊಜೆಕ್ಟ್ ಇಂಜಿನಿಯರ್ ರಾಮೇಂದ್ರಾನನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸಿದಾಗ ಯಾದವ್ ಸಿಂಗ್ ಹೆಸರು ಬಯಲಿಗೆ ಬಂದಿದೆ.
ಆರಂಭಿಕ ತನಿಖೆಯ ಪ್ರಕಾರ, ಯಾದವ್ ಸಿಂಗ್ 2500 ಕೋಟಿ ರೂಪಾಯಿಗಳನ್ನು ಯೋಜನೆಗಾಗಿ ವಿತರಿಸಿದ್ದು, ಶೇ.5 ರಷ್ಟು ಲಂಚ ಪಡೆದಿದ್ದ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಕಳೆದ 2014ರಲ್ಲಿ ಕೇವಲ ಎಂಟು ದಿನಗಳೊಳಗೆ ಯಾದವ್ ಸಿಂಗ್, 959 ಕೋಟಿ ರೂಪಾಯಿಗಳ ಕಾಮಗಾರಿಯನ್ನು 1280 ಕಂಪೆನಿಗಳಿಗೆ ಗುತ್ತಿಗೆ ನೀಡದ್ದರು ಎಂದು ಸಿಬಿಐ ಅಧಿಕಾರಿಗಳು ಎಫ್ಐಆರ್ನಲ್ಲಿ ದಾಖಲಿಸಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳು ಮತ್ತು ಸಿಬಿಐ ಅಧಿಕಾರಿಗಳು ಜಂಟಿಯಾಗಿ ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.