ಪಾಕಿಸ್ತಾನಿ ಗಜಲ್ ಗಾಯಕ ಗುಲಾಮ್ ಅಲಿ ಸಂಗೀತವನ್ನು ಆಯೋಜಿಸಿರುವ ಅಖಿಲೇಶ್ ಯಾದವ್ ಸರ್ಕಾರದ ಮೇಲೆ ಹರಿಹಾಯ್ದಿರುವ ಶಿವಸೇನೆ ಉತ್ತರ ಪ್ರದೇಶ ಇಸ್ಲಾಮಿಕ್ ಸ್ಟೇಟ್ ಆಗಿ ಪರಿವರ್ತನೆಯಾಗಿದೆ ಎಂದು ಹೇಳಿದೆ. ಜತೆಗೆ ರಾಜ್ಯ ಸರ್ಕಾರ ಓಲೈಕೆ ರಾಜಕಾರಣಕ್ಕಾಗಿ "ರಾಷ್ಟ್ರ ವಿರೋಧಿ ವ್ಯಾಪಾರ"ವನ್ನು ಪ್ರಾರಂಭಿಸಿದೆ ಎಂದು ಆರೋಪಿಸಿದೆ.
ಈ ಕಾರ್ಯಕ್ರಮ ಆಯೋಜಸಲು ಅವಕಾಶ ಮಾಡಿಕೊಟ್ಟವರ ಮೇಲೆ ರಾಷ್ಟ್ರ ದ್ರೋಹದ ಮೊಕದ್ದಮೆಯನ್ನು ದಾಖಲಿಸಬೇಕು ಎಂದು ಒತ್ತಾಯಿಸಿರುವ ಸೇನೆ ರಾಜ್ಯಸರ್ಕಾರದ ಈ ತೀರ್ಮಾನಕ್ಕೆ ಮೂಕಪ್ರೇಕ್ಷಕರಂತೆ ಕುಳಿತಿದೆ ಎಂದು ತನ್ನ ಮಿತ್ರ ಪಕ್ಷ ಬಿಜೆಪಿ ವಿರುದ್ಧ ಸಹ ಕಿಡಿಕಾರಿದೆ.
ಹಿಂದೂ- ಮುಸ್ಲಿಂ ಐಕ್ಯತೆಯನ್ನು ಉತ್ತೇಜಿಸಲು ಗುಲಾಂ ಅಲಿಯನ್ನು ಆಹ್ವಾನಿಸಲಾಗಿದೆ ಎಂದು ಇಸ್ಲಾಮಿಕ್ ಯಾದವ್ ಸರ್ಕಾರ ಹೇಳುತ್ತದೆ. ಆದರೆ ಏಕತೆಯನ್ನು ಪ್ರೋತ್ಸಾಹಿಸಲು ಪಾಕಿಸ್ತಾನಿ ಕಲಾವಿದರೆ ಯಾಕೆ ಬೇಕು? ನಮ್ಮ ದೇಶದಲ್ಲೂ ಸಾಕಷ್ಟು ಪ್ರಖ್ಯಾತ ಮುಸ್ಲಿಂ ಕಲಾವಿದರಿದ್ದಾರೆ ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಸೇನೆ ಬರೆದಿದೆ.
ಸದ್ಯವೇ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ತಲೆಯಲ್ಲಿಕೊಂಡು ಓಲೈಕೆ ರಾಜಕಾರಕಾರಣ ನಡೆಸುತ್ತಿರುವ ಯಾದವ್ ಸರ್ಕಾರ ರಾಷ್ಟ್ರ ವಿರೋಧಿ ವ್ಯಾಪಾರವನ್ನು ಪ್ರಾರಂಭಿಸಿದೆ ಎಂದು ಶಿವಸೇನೆ ಆರೋಪಿಸಿದೆ.
ಉತ್ತರ ಪ್ರದೇಶದಲ್ಲಿ ಅತ್ಯುತ್ತಮ ಕಲಾವಿದ ಗಣಿ. ಆದರೆ ಯಾದವ್ ಅವರಿಗೆ ಪಾಕಿಸ್ತಾನದ ಕಲ್ಲಿದ್ದಲಿನಲ್ಲಿಯೇ ಹೆಚ್ಚು ಆಸಕ್ತಿ, ಮುಸ್ಲಿಮರನ್ನು ಓಲೈಸಲು ಅವರು ನಾಳೆ ಉಗ್ರ ಹಫೀಜ್ ಸಯೀದ್ ಅವರನ್ನು ಆಹ್ವಾನಿಸಿದರೂ ಅಚ್ಚರಿ ಇಲ್ಲ ಎಂದು ಸೇನೆ ಆಕ್ರೋಶ ವ್ಯಕ್ತ ಪಡಿಸಿದೆ.