ಪರ ಜಾತಿಯ ಯುವಕನನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದ ಮಗಳನ್ನು ತಂದೆಯೇ ಗುಂಡಿಟ್ಟು ಕೊಂದ ದಾರುಣ ಘಟನೆ ಬರೇಲಿಯಲ್ಲಿ ನಡೆದಿದೆ.
ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ 23 ವರ್ಷದ ರಾಜ ಬಾಲಾ ನಿನ್ನೆ ತನ್ನ ತಂದೆ ಬಹೋರನ್ ಲಾಲ್ ಜಾತವ್ ಎಂಬಾತನಿಂದ ಕೊಲೆಯಾಗಿದ್ದಾಳೆ. ಸಿರೋಧಿ ಅಂಗಡ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೋಲೀಸ್ ಅಧೀಕ್ಷಕರಾದ ಬ್ರಿಜೇಶ್ ಶ್ರೀವಾತ್ಸವ್ ತಿಳಿಸಿದ್ದಾರೆ.
ಮಗಳನ್ನು ಕೊಂದಿದ್ದ ತಂದೆ ಆಕೆಯ ಅಂತ್ಯಸಂಸ್ಕಾರವನ್ನು ಸಹ ಮಾಡಿ, ಆಕೆಯ ಚಿತಾಭಸ್ಮವನ್ನು ರಾಮಗಂಗಾದಲ್ಲಿ ತೇಲಿ ಬಿಟ್ಟು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪೆಟ್ರೋಲ್ ಪಂಪ್ ಒಂದರಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ಸಂದೀಪ್ ಶರ್ಮಾ(22) ನನ್ನು ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದ ರಾಜ್ ಬಾಲಾ ಆಗಸ್ಟ್ 12ರಂದು ಆತನ ಜತೆ ಮದುವೆಯಾಗಲು ನಿರ್ಧರಿಸಿದ್ದಳು.
ಈ ಪ್ರೇಮ ಸಂಬಂಧಕ್ಕೆ ವಿರೋಧ ವ್ಯಕ್ತ ಪಡಿಸಿದ್ದ ಯುವತಿಯ ತಂದೆ ನಾಲ್ಕು ಬಾರಿ ಗುಂಡು ಹಾರಿಸಿ ಕೊಲೆಗೈದಿದ್ದಾನೆ.
ಮೇಲ್ನೋಟಕ್ಕೆ ಇದು ಮರ್ಯಾದಾ ಹತ್ಯೆ ಎಂಬಂತೆ ಕಂಡು ಬರುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತವ್, ಯುವತಿಯ ಸಹೋದರ ಮತ್ತು ಉಳಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಶ್ರೀವಾತ್ಸವ್ ತಿಳಿಸಿದ್ದಾರೆ.
ಮೃತಳ ಸಹೋದರಿ ಶರ್ಮಾ ಬಳಿ ಕೊಲೆ ವಿಚಾರವನ್ನು ಬಾಯ್ಬಿಟ್ಟಾಗ ವಿಷಯ ಬೆಳಕಿಗೆ ಬಂದಿದೆ. ಆತ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾನೆ.