ಕಾಂಗ್ರೆಸ್ ನಾಯಕ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಮತ್ತೆ ವಿವಾದದ ಹೇಳಿಕೆ ನೀಡಿ ಇಕ್ಕಟ್ಟಿನ ಸುಳಿಯಲ್ಲಿ ಸಿಲುಕಿದ್ದಾರೆ.
ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ಗೆ ಗಲ್ಲಿಗೇರಿಸಿ ಕೇಂದ್ರ ಸರಕಾರ ಮತ್ತು ನ್ಯಾಯಾಂಗ ಕರ್ತವ್ಯನಿಷ್ಠೆಯನ್ನು ಮೆರೆದಿದೆ. ಅದರಂತೆ ಎಲ್ಲಾ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದವರಿಗೆ ಜಾತಿ ಮತ ಭೇದ ಎಣಿಸದೆ ಇದೇ ರೀತಿ ಬದ್ಧತೆ ತೋರಬೇಕು ಎಂದು ಸಿಂಗ್ ಟ್ವೀಟ್ ಮಾಡಿರುವುದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
ಉಗ್ರ ಯಾಕುಬ್ ಮೆಮನ್ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅಂತ್ಯಸಂಸ್ಕಾರವನ್ನು ಹೋಲಿಕೆ ಮಾಡಿದ ಸಿಂಗ್, ಎಂತಹ ಸಾಮ್ಯತೆ ಇಬ್ಬರು ಮುಸ್ಲಿಮರ ಅಂತ್ಯಕ್ರಿಯೆ ಒಂದೇ ದಿನ ನಡೆದಿದೆ ಎಂದು ಹೇಳಿದ್ದಾರೆ.
ಡಾ.ಕಲಾಂ ತಮ್ಮ ಸಾಧನೆಯಿಂದ ಭಾರತ ಹೆಮ್ಮೆ ಪಡುವಂತೆ ಮಾಡಿದ್ದರೆ ಮತ್ತೊಂದೆಡೆ ಯಾಕೂಬ್ ಮೆಮನ್ ಭಯೋತ್ಪಾದನೆಯಲ್ಲಿ ಭಾಗಿಯಾಗಿ ಮುಸ್ಲಿಂ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಸಾಮಾಜಿಕ ಅಂತರ್ಜಾಲ ತಾಣವಾದ ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿದ್ದಾರೆ.