ತಮಿಳುನಾಡಿನಲ್ಲಿ ಜಲ್ಲಿಕಟ್ಟಿಗೆ ಇಬ್ಬರು ಬಲಿಯಾಗಿದ್ದು, 83 ಜನರಿಗೆ ಗಂಭೀರ ಗಾಯವಾಗಿದೆ.
ಪುದುಕೊಟೈ ಜಿಲ್ಲೆಯ ರಾಕೂಸಲ್ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು ಸ್ವತಃ ಕ್ರೀಡಾ ಸಚಿವ ವಿಜಯ್ ಭಾಸ್ಕರ್ ಅವರೇ ಇಲ್ಲಿ ಜಲ್ಲಿಕಟ್ಟಿಗೆ ಚಾಲನೆ ನೀಡಿದ್ದರು.
ಮೋಹನ್ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದರೆ, ರಾಜು ಎಂಬಾತ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಗೂಳಿ ಕೊಂಬು ಚುಚ್ಚಿದ್ದರಿಂದ ಇಬ್ಬರ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾಜ್ಯದ ವಿವಿಧೆಡೆ ನಡೆದ ಕ್ರೀಡೆಯಲ್ಲಿ ಒಟ್ಟು 83 ಜನರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಲ್ಲಿಕಟ್ಟು ಪರ ನಿಂತಿರುವ ತಮಿಳುನಾಡು ಸರ್ಕಾರ ಆಯೋಜಿಸಿದ್ದ ಕಡೆಯಲ್ಲೇ ಈ ದುರ್ಘಟನೆ ನಡೆದಿದ್ದು, ಮತ್ತೀಗ ಸರ್ಕಾರ ಹೇಗಿದನ್ನು ಸಮರ್ಥಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.
ಸುಗ್ರೀವಾಜ್ಞೆ ಹೊರಡಿಸಿದ ತಮಿಳುನಾಡಿನ ಹಲವು ಕಡೆ ಭಾನುವಾರ ಜಲ್ಲಿಕಟ್ಟು ಸ್ಪರ್ಧೆ ಆರಂಭವಾಗಿದೆ.
ಜತೆಗೆ ಜಲ್ಲಿಕಟ್ಟು ಸ್ಪರ್ಧೆಗೆ ಶಾಶ್ವತ ಪರಿಹಾರ ಸಿಗಬೇಕು ಮತ್ತು ಪ್ರಾಣಿ ದಯಾ ಸಂಘ ಪೆಟಾ ನಿಷೇಧಿಸಬೇಕು ಎಂದು ಒತ್ತಾಯಿಸಿ ಚೆನ್ನೈನ ಮರೀನಾ ಬೀಚ್ ಹಾಗೂ ಮಧುರೈನಲ್ಲಿ ಪ್ರತಿಭಟನೆ ಮುಂದುವರೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ