ಬಿಜೆಪಿ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಆಪ್ತ, ಅಮಿತ್ ಶಾರವರ 'ಸುನಾಮಿಯಾಗಿ ಬದಲಾದ ಅಲೆ' ಎಂಬ ಹೇಳಿಕೆಯ ಬಗ್ಗೆ ಪ್ರತಿದಾಳಿ ನಡೆಸಿರುವ ಕಾಂಗ್ರೆಸ್ ವರಿಷ್ಠ ದಿಗ್ವಿಜಯ್ ಸಿಂಗ್ "ಸುನಾಮಿ ಬಂದರೆ ಸರ್ವನಾಶವಾಗಲಿದೆ" ಎಂದು ಹೇಳಿದ್ದಾರೆ.
ವಾರಣಾಸಿಯಲ್ಲಿ ಮೋದಿ ತಮ್ಮ ನಾಮಪತ್ರವನ್ನು ಸಲ್ಲಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅಮಿತ್ ಶಾ "ಉತ್ತರಪ್ರದೇಶದಲ್ಲಿ ಇದ್ದ ಮೋದಿ ಅಲೆ ಸುನಾಮಿಯಾಗಿ ಬದಲಾಗಿದೆ. ಅದರ ರಭಸಕ್ಕೆ ಕಾಂಗ್ರೆಸ್, ಬಿಎಸ್ಪಿ ಮತ್ತು ಸಮಾಜವಾದಿ ಪಕ್ಷಗಳು ಕೊಚ್ಚಿ ಹೋಗಲಿವೆ. ಈ ಸುನಾಮಿ ಇಡಿ ದೇಶವನ್ನು ವ್ಯಾಪಿಸುತಿದೆ" ಎಂದಿದ್ದರು.
"ವಾರಣಾಸಿಯಲ್ಲಿ ಮೋದಿ ಪರ ಭಾರಿ ಬೆಂಬಲವಿದೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂಬುದರಲ್ಲಿ ಯಾವುದೇ ಸಂದೇಹ ಉಳಿದಿಲ್ಲ" ಎಂದು ಉತ್ತರಪ್ರದೇಶದಲ್ಲಿ ಬಿಜೆಪಿಯ ಪ್ರಚಾರದ ನೇತೃತ್ವ ವಹಿಸಿರುವ ಅಮಿತ್ ಶಾ ಹೇಳಿದ್ದರು.