ಪ್ರವಾಸಿಗರಿಗೆ ಕಿರುಕುಳ ನೀಡುವುದನ್ನು ದಮನಿಸಲು ಕಾನೂನು ಜಾರಿಗೆ ತರುವ ಕುರಿತು ಗೃಹ ಸಚಿವಾಲಯದ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ರಾಜ್ಯ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ. ಹೊಸದಾಗಿ ಜಾರಿಯಾಗುವ ನಿಯಮದಂತೆ ಪ್ರವಾಸಿಗರನ್ನು ಸ್ಪರ್ಶಿಸುವುದು ಸಹ ಶಿಕ್ಷಾರ್ಹ ಅಪರಾಧ ಎನಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸಚಿವರನ್ನು ಭೇಟಿಯಾಗಿ ಮಾತನಾಡುತ್ತಿದ್ದ ಆಗ್ರಾದ ಟ್ರಾವೆಲ್ ಅಸೋಸಿಯೇಷನ್ಸ್ ಒಕ್ಕೂಟದ ಅಧ್ಯಕ್ಷರಾಗಿರುವ ರಾಜೀವ್ ತಿವಾರಿ, ಪ್ರವಾಸಿಗರು ವಿಶೇಷವಾಗಿ ಮಹಿಳೆಯರು ಎದುರಿಸುವ ಸಂಕಷ್ಟವೇನೆಂದು ಸಚಿವರಿಗೆ ತಿಳಿದಿದೆ. ಈ ಕುರಿತು ಕಳವಳ ವ್ಯಕ್ತಪಡಿಸಿರುವ ಅವರು ಪ್ರವಾಸಿಗರ ಮೇಲಿನ ದೌರ್ಜನ್ಯವನ್ನು ತಡೆಯಲು ಹೊಸ ಕಾನೂನು ಶೀಘ್ರದಲ್ಲೇ ಜಾರಿ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು. ತಿವಾರಿ ಕೂಡ ನಿಯೋಗದ ಭಾಗವಾಗಿದ್ದಾರೆ.
ಈ ರೀತಿ ಶೋಷಿಸುವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ತಾಜ್ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಕಂಡುಬರಲು ಕಾರಣವಾಗಿದೆ ಎಂಬುದನ್ನು ಸಚಿವರು ಒತ್ತಿ ಹೇಳಿದ್ದಾರೆ ಎಂದು ತಿವಾರಿ ತಿಳಿಸಿದ್ದಾರೆ.
"ಕಳೆದ ವರ್ಷ ನಗರಕ್ಕೆ ಆಗಮಿಸಿದ ಪ್ರವಾಸಿಗಳ ಪ್ರಮಾಣದಲ್ಲಿ 10% ಇಳಿಕೆ ಕಂಡುಬಂದಿದೆ. ಅದಕ್ಕೆ ಕಿರುಕುಳವೇ ಪ್ರಮುಖ ಕಾರಣವಾಗಿದೆ ಎಂದು ಸಚಿವರು ಹೇಳಿದ್ದಾರೆ ," ಎಂದು ಅಪ್ರೂವ್ಡ್ ಗೈಡ್ಸ್ ಅಸೋಸಿಯೇಷನ್ (ಆಗ್ರಾ) ಅಧ್ಯಕ್ಷ ಸಂಜಯ್ ಶರ್ಮಾ ಹೇಳಿದ್ದಾರೆ.
ಪ್ರೇಮ ಸ್ಮಾರಕ ತಾಜ್ಮಹಲ್ಗೆ ಭೇಟಿ ಕೊಡುವ ದೇಶೀಯ ಮತ್ತು ವಿದೇಶಿಯ ಪ್ರವಾಸಿಗರಲ್ಲಿ ಹೆಚ್ಚಿನವರು, ವಂಚನೆ, ನಿಂದನೆ, ಶೋಷಣೆಯಂತಹ ಕಹಿ ಅನುಭವದೊಂದಿಗೆ ಹಿಂತಿರುಗುತ್ತಾರೆ. ದಲ್ಲಾಳಿಗಳು, ಮಾರ್ಗದರ್ಶಿಗಳು, ಆಟೋ ಮತ್ತು ಟ್ಯಾಕ್ಸಿ ಚಾಲಕರು, ಹೋಟೆಲ್ ಮಾಲೀಕರು ಜೊತೆಗೆ, ತ್ವರಿತವಾಗಿ ಗ್ರಾಹಕರನ್ನು ಸೆಳೆದುಕೊಳ್ಳಲು ಮೈಮೇಲೆರಗಿ ಮುಗಿ ಬೀಳುತ್ತಾರೆ ಮತ್ತು ಪ್ರವಾಸಿಗರಿಂದ ಹಣ ಕೀಳಲು ತಪ್ಪು ಮಾಹಿತಿ ನೀಡುವುದು ಸಹ ಇಲ್ಲಿ ಸಾಮಾನ್ಯವಾಗಿದೆ.