ಭಾರತದಲ್ಲಿರುವ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮೀಯರ ಪೂರ್ವಜರು ಕೂಡ ಹಿಂದೂಗಳಾಗಿದ್ದರು ಎಂದು ವಿಶ್ವ ಹಿಂದೂ ಪರಿಷತ್ ವರಿಷ್ಠ ಪ್ರವೀಣ್ ಬಾಯ್ ತೊಗಾಡಿಯಾ ಹೇಳಿದ್ದಾರೆ.
ಗುಜರಾತಿನ ಭಾವ್ ನಗರದಲ್ಲಿ ಆಯೋಜಿಸಲಾಗಿದ್ದ ವಿಹಿಂಪದ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಮಾತನಾಡುತ್ತಿದ್ದ ತೊಗಾಡಿಯಾ "ದೇಶದಲ್ಲಿನ ಮುಸ್ಲಿಮರ ಹಿರಿಯರು ಸನಾತನ ಧರ್ಮದವರಾಗಿದ್ದರು. ಜತೆಗೆ ಕ್ರಿಶ್ಚಿಯನ್ನರ ಪೂರ್ವಿಕರು ಕೂಡ ಹಿಂದೂ ಧರ್ಮಾನುಯಾಯಿಗಳೇ ಆಗಿದ್ದರು. ಮೊಘಲ್ರ ಆಳ್ವಿಕೆಯಲ್ಲಿ ಮತಾಂತರ ನಡೆದಿತ್ತು. ಆ ಕಾಲದಲ್ಲಿ ಹಿಂದೂಗಳನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಪರಿವರ್ತಿಸಲಾಯಿತು.ಮತ್ತೆ ಕೆಲವರು ದಬ್ಬಾಳಿಕೆಗೆ ಹೆದರಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂಬುದಕ್ಕೆ ಐತಿಹಾಸಿಕ ಪುರಾವೆ ಇದೆ" ಎಂದಿದ್ದಾರೆ.
"ಈಗ ನಮ್ಮ ದೇಶದಲ್ಲಿ ಹಿಂದೂಗಳ ಮೇಲೆ ಮೇಲೆ ಯಾರೂ ದಬ್ಬಾಳಿಕೆ ನಡೆಸುತ್ತಿಲ್ಲ. ಈ ಸನ್ನಿವೇಶದಲ್ಲಿ ಯಾರಾದರೂ ಹಿಂದೂ ಧರ್ಮಕ್ಕೆ ಮರಳಿ ಬರುವ ಇಚ್ಛೆ ಹೊಂದಿದ್ದರೆ ಅವರನ್ನು ಹಿಂದೂಗಳು ಪೂರ್ಣ ಮನಸ್ಸಿನಿಂದ ಸ್ವೀಕರಿಸಬೇಕು" ಎಂದು ತೊಗಾಡಿಯಾ ಮನವಿ ಮಾಡಿಕೊಂಡಿದ್ದಾರೆ .