ಚಲಿಸುತ್ತಿದ್ದ ಎಕ್ಸ್ಪ್ರೆಸ್ ರೈಲಿನಿಂದ ಪ್ರಯಾಣಿಕಳನ್ನು ಹೊರತಳ್ಳಿದ ಪರಿಣಾಮ ಆಕೆಯ ಕಾಲು ತಂಡಾಗಿ, ಗಂಭೀರವಾಗಿ ಗಾಯಗೊಂಡ ಪ್ರಕರಣ ಜಬಲ್ಪುರದಲ್ಲಿ ನಡೆದಿದೆ , ಟಿಕೆಟ್ ಪರೀಕ್ಷಕನಾದ ಮಹೇಂದ್ರ ಕುಮಾರ್ ಈ ದುಷ್ಕೃತ್ಯ ಎಸಗಿದ್ದು ಘಟನೆ ಬೆಳಕಿಗೆ ಬರುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ.
ಇಂದು ಮುಂಜಾನೆ ಜಬಲ್ಪುರ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ಜಬಲ್ಪುರದಿಂದ ನೈನ್ಪುರ ಕಡೆ ಹೋಗುತ್ತಿದ್ದ ಸತಪುಡಾ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 40 ವರ್ಷ ವಯಸ್ಸಿನ ಲೋಂಗಾ ಬಾಯಿ ಬಳಿ ಟಿಟಿಇ ಟಿಕೆಟ್ ಕೇಳಿದ್ದಾನೆ. ಆಕೆಯ ಟಿಕೆಟ್ ಪರಿಶೀಲಿಸಿದ ಬಳಿಕ ಬೇರೆ ಬೋಗಿಗೆ ಹೋಗುವಂತೆ ಆತ ಸೂಚಿಸಿದ್ದಾನೆ. ಮುಂದಿನ ನಿಲ್ದಾಣದಲ್ಲಿ ತಾನು ಕೋಚ್ ಬದಲಿಸುವುದಾಗಿ ಆಕೆ ಆಶ್ವಾಸನೆ ನೀಡಿದ್ದಾಳೆ. ಆದರೆ ಅವಳ ಮಾತಿಗೆ ಒಪ್ಪದ ಮಹೇಂದ್ರ ಕುಮಾರ್ ರೈಲು ಚಲಿಸುತ್ತಿದ್ದಾಗಲೇ ಆಕೆಯನ್ನು ಕೆಳಕ್ಕೆ ತಳ್ಳಿದ್ದಾನೆ. ಹೀಗಾಗಿ ರೈಲು ಆಕೆಯ ಕಾಲ ಮೇಲೆ ಹರಿದು ಕಾಲು ತಂಡಾಗಿ ಹೋಗಿದೆ ಮತ್ತು ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.