ಬ್ಯಾಂಕ್ ಒಂದರಲ್ಲಿ ಸಿಕ್ಕ 50,000 ರೂಪಾಯಿಗಳುಳ್ಳ ಪೊಟ್ಟಣವನ್ನು, ಪುಟ್ಟ ಬಾಲಕನೊಬ್ಬ ಬ್ಯಾಂಕ್ ವ್ಯವಸ್ಥಾಪಕರಿಗೆ ಮರಳಿಸಿದ್ದಾನೆ. ಏನೂ ಅರಿಯದ ಈ ಪುಟ್ಟ ವಯಸ್ಸಿನಲ್ಲೂ ಮೂರು ವರ್ಷದ ಬಾಲಕ ಪ್ರಾಮಾಣಿಕತೆ ಮೆರೆಯುವುದರ ಮೂಲಕ ಹಿರಿಯರಿಗೆ ಮಾದರಿಯಾಗಿದ್ದಾನೆ.
ಬಾಲಕ ಶಿವಂನ ಪ್ರಾಮಾಣಿಕತೆಯ ಬಗ್ಗೆ ಕೇಳಿದ ಉತ್ತರಾಖಂಡ್ ರಾಜ್ಯಪಾಲರಾದ ಅಜೀಜ್ ಖುರೇಶಿ ರಾಜ ಭವನದಲ್ಲಿ ಅವನನ್ನು ಭೇಟಿಯಾಗಿ ಬೆನ್ನು ತಟ್ಟಿದ್ದಾರೆ ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.
ನವೆಂಬರ್ 10 ರಂದು ಈ ಘಟನೆ ನಡೆದಿದೆ. ಬಾಲಕ ಶಿವಂ ಅಂದು ತನ್ನ ಅಜ್ಜಿಯ ಜತೆ ಪಂಜಾಬ್ ನ್ಯಾಶನಲ್ ಬ್ಯಾಂಕಿನ ಮಾಯಾಪುರ ಬ್ರಾಂಚ್ಗೆ ಹೋಗಿದ್ದ. ಅಲ್ಲಿ ಆತನಿಗೆ 50,000 ರೂಪಾಯಿಗಳುಳ್ಳ ಪ್ಯಾಕೆಟ್ ಒಂದು ಸಿಕ್ಕಿದೆ.ಆತ ಅದನ್ನು ತನ್ನ ಅಜ್ಜಿಯ ಬಳಿ ಕೊಟ್ಟಿದ್ದಾನೆ. ಆಕೆಯದನ್ನು ಬ್ಯಾಂಕ್ ಮ್ಯಾನೇಜರ್ ಕೈಗೊಪ್ಪಿಸಿದ್ದಾಳೆ ಎಂದು ವರದಿ ತಿಳಿಸಿದೆ.
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಬಾಲಕನ ತಂದೆ ಈಗ ರಾಜ ಭವನಕ್ಕೆ ವರ್ಗಾವಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.