ಮನುಷ್ಯನ ಸ್ವಾರ್ಥಕ್ಕೆ ಕಾಡುಗಳು ನಾಶವಾಗುತ್ತಿರುವುದು ಕಾಡುಪ್ರಾಣಿಗಳು ಆಹಾರ, ನೀರು ಹುಡುಕಿಕೊಂಡು ನಗರಗಳತ್ತ ಬರುವುದಕ್ಕೆ ಕಾರಣವಾಗಿವೆ. ಆನೆ, ಚಿರತೆ, ಹಾವುಗಳ ಕಾಟದಿಂದ ಜನ ಭಯಗ್ರಸ್ತರಾಗಿದ್ದಾರೆ ಎಂಬ ಸುದ್ದಿಗಳನ್ನು ದಿನ ಪ್ರತಿದಿನ ಓದುತ್ತಿರುತ್ತೇವೆ. ಕಳೆದ ಮಂಗಳವಾರ ರಾತ್ರಿ ಗುರುಗ್ರಾಮದಲ್ಲಿ ಸಹ ಇಂತಹದೇ ಸಮಸ್ಯೆಯೊಂದು ಕಾಡಿತ್ತು. ಆದರೆ ನಾಯಿಗಳಿಂದಾಗಿ ಜನರು ಅಪಾಯದಿಂದ ಪಾರಾಗಿದ್ದಾರೆ.
ರಾತ್ರಿ ಸಮಯದಲ್ಲಿ ಗುರುಗ್ರಾಮದ ಅಪಾರ್ಟಮೆಂಟ್ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಂಡಿತು. ನಾಯಿಯೊಂದನ್ನು ಬಾಯಲ್ಲಿ ಕಚ್ಚಿ ಹಿಡಿದ ಅಲ್ಲಿ ನಿಲ್ಲಿಸಿಟ್ಟಿದ್ದ ವಾಹನದ ಬಳಿ ಎಳೆದೊಯ್ದಿದೆ. ಆದರೆ ಅದರ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾದ ನಾಯಿ ಪ್ರತಿ ದಾಳಿ ನಡೆಸಿದ್ದಲ್ಲದೆ ಮತ್ತೆರಡು ನಾಯಿಗಳಿಗೆ ಈ ಕುರಿತು ಸೂಚನೆ ನೀಡಿದೆ. ಮೂರು ನಾಯಿಗಳ ಏಕಾಏಕಿ ದಾಳಿಗೆ ಬೆಚ್ಚಿಬಿದ್ದ ಚಿರತೆ ಅಲ್ಲಿಂದ ಓಡಿ ಹೋಗಿದೆ.
ಈ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಾಯಿಗಳಿಂದಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಅನೇಕ ದಿನಗಳಿಂದ ಆ ಚಿರತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡುತ್ತಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.