ದೇಶದ ವೀರಪುತ್ರ ಹನುಮಂತಪ್ಪ ಇಂದು ನಮ್ಮನ್ನಗಲಿದ್ದಾರೆ. ಪತಿ ಬದುಕುಳಿದ ಸುದ್ದಿ ಕೇಳಿ ದೇವರಿಗೆಲ್ಲ ಪೂಜೆ ಸಲ್ಲಿಸಿ ಆತನನ್ನು ಕಾಣಲು ದೆಹಲಿಗೆ ಓಡೋಡಿ ಹೋದ ಪತ್ನಿ ಮಹಾದೇವಿಯ ಪೂಜೆ, ಹಾರೈಕೆ ಫಲ ಕೊಡಲೇ ಇಲ್ಲ. ತನ್ನ ಪತಿಗಾಗಿ ಆಕೆ ಪಟ್ಟ ಕೊನೆಯಾಸೆ ಏನು ಗೊತ್ತೇ?
'ಓ ದೇವರೆ, ನನ್ನ ಪತಿ ಪುನರ್ಜನ್ಮವಿದು. ದಯವಿಟ್ಟು ಅವರನ್ನು ಮತ್ತೆ ಕರೆದುಕೊಳ್ಳಬೇಡ. ಒಂದು ವೇಳೆ ಮತ್ತೆ ಜೀವ ತೆಗೆದುಕೊಳ್ಳಬೇಕೆಂದಿದ್ದರೆ ನನ್ನ ಜೀವ ತೆಗೆದುಕೋ. ದೇಶವನ್ನು ರಕ್ಷಿಸಲು ನನ್ನ ಪತಿಯನ್ನು ಬದುಕಲು ಬಿಡು. ಅವರು ಬದುಕಲೇ ಬೇಕು', ಎಂದು ಪತಿ ಸಾಯುವ ಕೆಲ ಹೊತ್ತಿನ ಮುನ್ನ ಮಹಾದೇವಿ ದೇವರಲ್ಲಿ ಆರ್ತವಾಗಿ ಬೇಡಿಕೊಂಡಿದ್ದರು. ಆದರೆ ಅವರ ಪ್ರಾರ್ಥನೆಯನ್ನು ದೇವರು ಕೇಳಲೇ ಇಲ್ಲ.
ಸಿಯಾಚಿನ್ ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ, ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದ ಧಾರವಾಡ ಜಿಲ್ಲೆಯ ಕುಂದಗೊಳ ತಾಲೂಕಿನ ಬೆಟದೂರಿನ ಯೋಧ ಲ್ಯಾನ್ಸ್ನಾಯಕ್ ಹನುಮಂತಪ್ಪ ಕೊಪ್ಪದ್ ಬದುಕುಳಿಯ ಬೇಕೆಂದರೆ ಮತ್ತೊಂದು ಪವಾಡವಾಗಬೇಕು ಎಂದು ವೈದ್ಯರು ಹೇಳಿದ್ದರು. ಆದರೆ ಸಂಪೂರ್ಣ ದೇಶವಾಸಿಗಳ ಪ್ರಾರ್ಥನೆ ಕೈಗೂಡಲಿಲ್ಲ. ಪವಾಡ ನಡೆಯಲೇ ಇಲ್ಲ. ಹನುಮಂತಪ್ಪ ಬದುಕುಳಿಯಲೇ ಇಲ್ಲ.