ಬಿಹಾರ್ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜನತಾ ಪರಿವಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಜಂಗಲ್ ರಾಜ್ ಕಾಣಿಸಿಕೊಳ್ಳಲಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಆರ್ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಮೈತ್ರಿಕೂಟದ ಜನತಾ ಪರಿವಾರ ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಲಿದೆ. ಒಂದು ವೇಳೆ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಬಿಹಾರ್ ರೌಡಿಗಳ ತಾಣವಾಗಲಿದೆ ಎಂದು ಮತದಾರರನ್ನು ಎಚ್ಚರಿಸಿದರು.
ಮುಂಬರುವ ಬಿಹಾರ್ ವಿಧಾನಸಭೆ ಚುನಾವಣೆ ಅಂಗವಾಗಿ ಪಕ್ಷದ ವಿಜನ್ ಡಾಕ್ಯುಮೆಂಟ್ ಬಿಡುಗಡೆಗೊಳಿಸಿದ ಜೇಟ್ಲಿ, ಮಧ್ಯಪ್ರದೇಶವನ್ನು ಅಭಿವೃದ್ಧಿಗೊಳಿಸಿದಂತೆ, ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಬಿಹಾರ್ ರಾಜ್ಯದ ಅಭಿವೃದ್ಧಿಗೂ ಕಂಕಣಬದ್ಧವಾಗಿದೆ ಎಂದರು.
ಜನತಾ ಪರಿವಾರದಲ್ಲಿರುವ ಪಕ್ಷಗಳು ಅವಕಾಶವಾದಿ ಪಕ್ಷಗಳು. ಬಿಹಾರ್ ರಾಜ್ಯದ ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಕಳಕಳಿಯಿಲ್ಲ. ರಾಜ್ಯವನ್ನು ಮತ್ತಷ್ಟು ಹಿಂದುಳಿಯುವಂತೆ ಮಾಡುತ್ತವೆ ಎಂದು ಮತದಾರರನ್ನು ಎಚ್ಚರಿಸಿದರು.
ಮುಂಬರುವ ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಿತ್ರಕೂಟ ಜಯಭೇರಿ ಬಾರಿಸಲಿದೆ. ಆರ್ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಅಸ್ತಿತ್ವವಿಲ್ಲ. ಒಂದು ವೇಳೆ ಅಸ್ತಿತ್ವವಿದ್ದರೂ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.