ಖಾಸಗಿ ಶಾಲೆಯ ಶಿಕ್ಷಕನೊಬ್ಬ ತನ್ನ ಮಹಿಳಾ ಸಹೋದ್ಯೋಗಿಗೆ ಚಾಕುವಿನಿಂದ ಇರಿದು ಕೊಂದ ಘಟನೆ ಉದೈಪುರದಲ್ಲಿ ನಡೆದಿದೆ. ಅವರಿಬ್ಬರ ನಡುವೆ ಪ್ರೇಮ ಸಂಬಂಧವಿತ್ತು ಎಂದು ಹೇಳಲಾಗುತ್ತಿದೆ.
ನೂರಾರು ಜನರ ಸಮ್ಮುಖದಲ್ಲಿ ಮಾರುಕಟ್ಟೆ ಈ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಹಲ್ಲೆಗೊಳಗಾದ ಮಹಿಳೆ ಸಹಾಯಕ್ಕಾಗಿ ಚೀರಾಡುತ್ತ ಕೊನೆಯುಸಿರೆಳೆದಿದ್ದಾಳೆ.
ಅಷ್ಟೆಲ್ಲಾ ಜನರಿದ್ದರೂ ಒಬ್ಬರು ಕೂಡ ಮಹಿಳೆಯ ಸಹಾಯಕ್ಕೆ ಬರಲಿಲ್ಲ ಎಂದು ತಿಳಿದು ಬಂದಿದೆ. ಆಕೆಯನ್ನು ಕೊಂದ ಬಳಿಕ ತನ್ನ ಮಣಿಕಟ್ಟನ್ನು ಕೊಯ್ದುಕೊಂಡ ಶಿಕ್ಷಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಳನ್ನು 23 ವರ್ಷದ ನೀಲಂ ಎಂದು ಗುರುತಿಸಲಾಗಿದ್ದು ಆರೋಪಿ ಪಿಯೂಷ್ ಭಂಡಾರಿ(27) ಜತೆ ಕಳೆದೊಂದು ವರ್ಷದ ಹಿಂದೆ ಆಕೆಗೆ ಪ್ರೇಮ ಸಂಬಂಧವಿತ್ತು. ಒಂದು ಮಗುವಿನ ತಾಯಿಯಾಗಿರುವ ಆಕೆ ಪತಿಯಿಂದ ದೂರವಿದ್ದಳು. ಕೆಲ ದಿನಗಳ ಹಿಂದೆ ಪಿಯೂಷ್ ಜತೆ ದೇವಸ್ಥಾನವೊಂದರಲ್ಲಿ ರಹಸ್ಯವಾಗಿ ಮದುವೆಯಾಗಿದ್ದಳು. ಇದನ್ನು ಬಹಿರಂಗ ಪಡಿಸಿರಲಿಲ್ಲ. ಪಿಯೂಷ್ ಅಧಿಕೃತವಾಗಿ ಮದುವೆಯಾಗೋಣ ಎಂದು ಒತ್ತಾಯಿಸತೊಡಗಿದಾಗ ಆಕೆ ಅದನ್ನು ನಿರಾಕರಿಸಿದ್ದಳು ಮತ್ತು ಇತ್ತೀಚಿಗೆ ಆತನಿಂದ ದೂರವಿರತೊಡಗಿದ್ದಳು. ಈ ಕಾರಣಕ್ಕೆ ಪಿಯೂಷ್ ಆಕೆಯನ್ನು ಕೊಲ್ಲುವ ನಿರ್ಧಾರ ಕೈಗೊಂಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.