ಅಖಿಲೇಶ್ ಯಾದವ್ ಸರ್ಕಾರದ ಅವಧಿಯಲ್ಲಿ ಸಚಿವರುಗಳ ದುಬಾರಿ ಅತಿಥಿಸತ್ಕಾರದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಚಹಾ , ಸಮೋಸಾ ಮತ್ತು ಗುಲಾಬ್ ಜಾಮೂನ್ ಮುಂತಾದ ಸ್ನ್ಯಾಕ್ಗಳನ್ನು ಅತಿಥಿಗಳಿಗೆ ಬಡಿಸಿದ್ದರಿಂದ ಉತ್ತರ ಪ್ರದೇಶ ರಾಜ್ಯದ ಬೊಕ್ಕಸಕ್ಕೆ ನಾಲ್ಕು ವರ್ಷಗಳ ಅವಧಿಯಲ್ಲಿ ಬರೋಬ್ಬರಿ 9 ಕೋಟಿ ರೂ. ನಷ್ಟವಾಗಿದೆ.
ನಿಖರವಾಗಿ ಹೇಳುವುದಾದರೆ 2012ರ ಮಾರ್ಚ್ 15ರಿಂದ 2016ರ ಮಾರ್ಚ್ 15ರವರೆಗೆ ಸರ್ಕಾರ ನಾಲ್ಕು ವರ್ಷ ಪೂರೈಸಿದಾಗ ಲಘು ಉಪಹಾರಗಳಿಗೆ 8,78,12, 474 ರೂ. ಖರ್ಚಾಗಿದೆ.
ಈ ಅಂಕಿಅಂಶಗಳನ್ನು ಬಿಚ್ಚಿಟ್ಟವರು ಬೇರೆ ಯಾರೂ ಅಲ್ಲ, ಸ್ವತಃ ಮುಖ್ಯಮಂತ್ರಿ ಬುಧವಾರ ವಿಧಾನಸಭೆಯಲ್ಲಿ ಹೇಳಿದರು.
ರಾಜ್ಯ ಖಾತೆ ಸಚಿವೆ ಅರುಣ್ ಕುಮಾರ್ ಕೋರಿ ಅತಿಥಿ ಸತ್ಕಾರದ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿದ್ದು, ಸಾಮಾಜಿಕ ಕಲ್ಯಾಣ ಸಚಿವರಾಗಿ ನಾಲ್ಕು ವರ್ಷಗಳ ಅವಧಿಯಲ್ಲಿ 22, 93,800 ರೂ. ಖರ್ಚು ಮಾಡಿದ್ದಾರೆ. ಅವರ ಬೆನ್ನ ಹಿಂದೆ ನಗರ ಅಭಿವೃದ್ಧಿ ಸಚಿವ ಮೊಹಮ್ಮದ್ ಅಜಮ್ ಖಾನ್ 22, 86, 620 ರೂ. ಅತಿಥಿಸತ್ಕಾರಕ್ಕೆ ಖರ್ಚು ಮಾಡಿದ್ದಾರೆ.