ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಈ ಮಟ್ಟಕ್ಕೆ ಇಳಿಯುತ್ತಾರೆ ಅಂತ ತಿಳಿದಿರಲಿಲ್ಲ. ಯಾವ ಕೇಸು ಹಾಕಿದ್ದಾರೆ ಎಂಬುದು ನನಗಿನ್ನೂ ಗೊತ್ತಿಲ್ಲ. ಆದರೆ, ಕೇಸು ಹಾಕಿರುವುದಂತೂ ಸತ್ಯ. ಇಷ್ಟಕ್ಕೂ ನಾವು ಮಾಡಿರುವ ತಪ್ಪಾದರೂ ಏನು ಎಂದು ಖಾರವಾಗಿಯೇ ಸಿಎಂ ಸೋದರಿ ಶೈಲಜಾ ಪ್ರಶ್ನಿಸಿದ್ದಾರೆ.
ಜಯಲಲಿತಾ ನಮ್ಮ ಅಕ್ಕ, ನಾನು ಅವರ ಸೋದರಿ. ವಾಸುದೇವನ್ ನಮ್ಮ ತಂದೆಯ ಮೊದಲ ಹೆಂಡತಿ ಮಗ. ಈ ಬಗ್ಗೆ ಎಲ್ಲಿ ಕೇಳಿದರೂ ಬಂದು ಹೇಳುತ್ತೇನೆ. ನಾನು ಅವರ ಸೋದರಿ ಎನ್ನುವುದಕ್ಕೆ ಸಾಕ್ಷಿ ಬೇಕಿದ್ದರೆ ಡಿಎನ್ಎ ಪರೀಕ್ಷೆಗೂ ಸಿದ್ಧ ಎಂದಿದ್ದಾರೆ.
ಜಯಲಲಿತಾರ ತಂದೆ ಜಯರಾಮನ್ರ ಮೊದಲ ಪತ್ನಿ ಜಯಮ್ಮಾಳ್ ಪುತ್ರ. ಜಯಲಲಿತಾ ತಾಯಿ ಸಂಧ್ಯಾ ಜಯರಾಮನ್ರಿಗೆ ಎರಡನೇ ಪತ್ನಿ. ಸಂಧ್ಯಾ ತಮ್ಮ ಪುತ್ರಿ ಜಯಲಲಿತಾ ಜೊತೆ ಚೆನ್ನೈಗೆ ತೆರಳುವ ಮುನ್ನ ಜಯಮ್ಮಾಳ್ರ ಆಸ್ತಿ ಮಾರಿಕೊಂಡು ಹೋದರು.
ನಾನು ಮತ್ತು ಜಯಲಲಿತಾ ಒಂದೇ ತಾಯಿ ಮಕ್ಕಳು ಅಲ್ಲದಿದ್ದರೂ ಒಂದೇ ತಂದೆಯ ಮಕ್ಕಳು. ನಮ್ಮ ಆಸ್ತಿ ಮಾರಿಕೊಂಡು ಚೆನ್ನೈಗೆ ಹೋಗಿದ್ದು ಜಯಲಲಿತಾರ ಅಮ್ಮ ಸಂಧ್ಯಾ. ಈ ವಿಚಾರದಲ್ಲಿ ನನಗೆ ನ್ಯಾಯ ಬೇಕು. ಆದರೆ, ಅವರು ನನ್ನ ಮೇಲೆಯೇ ಕ್ರಿಮಿನಲ್ ಕೇಸು ಹಾಕಿದ್ದಾರೆ. ಕ್ರಿಮಿನಲ್ ಕೇಸು ಹಾಕಿಸಿಕೊಳ್ಳುವಂಥ ತಪ್ಪು ನಾನೇನು ಮಾಡಿದ್ದೇನೆ?
'ತಮ್ಮ ಬಗ್ಗೆ ಬರೆದವರ ಮೇಲೆ ಕೇಸು ಹಾಕಿ ಜೈಲಿಗೆ ಕಳುಹಿಸುವುದು ಜಯಲಲಿತಾರಿಗೆ ಹೊಸದಲ್ಲ. ತುಂಬಾ ವರ್ಷ ಹಿಂದೆಯೇ ನಾನು ತಮಿಳುನಾಡಿನಲ್ಲೇ ಪತ್ರಿಕಾಗೋಷ್ಠಿ ಮಾಡಿ ನಮ್ಮ ಕುಟುಂಬದ ಮಾಹಿತಿ ನೀಡಿದೆ. ಅದನ್ನು ನಕ್ಕೀರನ್ ಪತ್ರಿಕೆ ಸುದ್ದಿ ಮಾಡಿತು. ಆಗ ಆ ಪತ್ರಿಕೆ ಕಚೇರಿ ಮೇಲೆ ದಾಳಿ ಅವರನ್ನೂ ಜೈಲಿಗೆ ಕಳುಹಿಸಿದ ಖ್ಯಾತಿ ತಮಿಳುನಾಡು ಸಿಎಂಗೆ ಸಲ್ಲುತ್ತದೆ. ಈಗ ನನ್ನ ಮತ್ತು ಶೈಲಜಾರ ಮೇಲೆ ಕೇಸು ಹಾಕಿದ್ದಾರೆ. ಈ ವಯಸ್ಸಿನಲ್ಲಿ ಅವರ ಎದುರು ನಿಂತು ಹೋರಾಡುವ ಶಕ್ತಿ ನನಗಿಲ್ಲ. ಆದರೂ ನನಗೆ ನ್ಯಾಯ ಬೇಕು ಎಂದು ಜಯಲಲಿತಾ ಸಹೋದರ ವಾಸುದೇವನ್ ಹೇಳಿದ್ದಾರೆ.