ಸಯ್ಯದ್ ಅಲಿ ಷಾ ಜಿಲಾನಿಯ ಹುರಿಯತ್ ಕಾನ್ಫರೆನ್ಸ್ ಬಣಕ್ಕೆ ಸೇರಿದ ಮೂವರು ಸದಸ್ಯರ ನಿಯೋಗ ಮಂಗಳವಾರ ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಾಸಿತ್ ಅವರನ್ನು ಭೇಟಿಯಾಗಿ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರಿಗೆ ತಲುಪಿಸುವಂತೆ ಗೌಪ್ಯ ಪತ್ರವೊಂದನ್ನು ಹಸ್ತಾಂತರಿಸಿದೆ.
ಹುರಿಯತ್ ಕಾನ್ಫರೆನ್ಸ್ ವಕ್ತಾರ ಅಯಾಝ್ ಅಕ್ಬರ್ ಈ ಬುಧವಾರ ಇದನ್ನು ಸ್ಪಷ್ಟಪಡಿಸಿದ್ದು, ಗಿಲಾನಿ ಸಾಹೇಬರ ಪತ್ರವನ್ನು ನವದೆಹಲಿಯಲ್ಲಿರುವ ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ಅವರ ಬಳಿ ನೀಡಿ ಪಾಕ್ ಪ್ರಧಾನಿ ನವಾಜ್ ಶರೀಫ್ಗೆ ತಲುಪಿಸುವಂತೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.
ಗಿಲಾನಿಯವರ ಪ್ರಮುಖ ಸಹಚರರಾದ ಆಯಾಝ್ ಅಕ್ಬರ್, ಪೀರ್ ಸೈಫುಲ್ಲಾ, ಅಲ್ತಾಫ್ ಅಹಮದ್ ಒಳಗೊಂಡ ಮೂವರು ಸದಸ್ಯರ ನಿಯೋಗ ನಿನ್ನೆ ಬಸಿತ್ ಕಚೇರಿಗೆ ಭೇಟಿ ನೀಡಿ ಗಂಟೆಗಳ ಕಾಲ ಮಾತುಕತೆ ನಡೆಸಿತು.
ಅದು ಅತ್ಯಂತ ಮಹತ್ವದ ಪತ್ರ ಗೌಪ್ಯ ಪತ್ರವಾಗಿದೆ. ಬುಧವಾರ ಇದನ್ನು ಪಾಕ್ ಪ್ರಧಾನಿಗೆ ರವಾನಿಸಲಾಗುವುದು ಎಂದು ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅಕ್ಬರ್ ಸುದ್ದಿ ಪತ್ರಿಕೆಯೊಂದರ ಜತೆ ಅವರು ಹೇಳಿದ್ದಾರೆ.
ಎರಡು ದೇಶಗಳ ನಡುವಿನ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ)ರ ಮಟ್ಟದ ಮಾತುಕತೆಯನ್ನು ಪಾಕಿಸ್ತಾನ ಹಿಂದೆಗೆದುಕೊಂಡ ನಂತರ ಇದೇ ಮೊದಲ ಬಾರಿಗೆ ಹುರಿಯತ್ ಸದಸ್ಯರು ಪಾಕಿಸ್ತಾನದ ರಾಯಭಾಯನ್ನು ಭೇಟಿಯಾಗಿದ್ದಾರೆ .