ಡಿಡಿಸಿಎ ಪ್ರಕರಣದಲ್ಲಿ ನಡೆದ ಭ್ರಷ್ಟಾಚಾರದ ಕುರಿತಂತೆ ಪ್ರಧಾನಿ ಮೋದಿ ಸರಕಾರ ಮೌನವಾಗಿದ್ದು ಸಿಬಿಐ ಕೂಡಾ ಕೇಂದ್ರ ಸರಕಾರದ ಪಂಜರದಲ್ಲಿರುವ ಗಿಣಿಯಾಗಿದೆ. ಆದ್ದರಿಂದ, ಮೋದಿ ಸರಕಾರ ಮತ್ತು ಕೇಂದ್ರ ವಿತ್ತಖಾತೆ ಸಚಿವ ಅರುಣ್ ಜೇಟ್ಲಿ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುವುದಾಗಿ ಅನಾತ್ತುಗೊಂಡ ಬಿಜೆಪಿ ಸಂಸದ ಕೀರ್ತಿ ಆಜಾದ್ ಹೇಳಿದ್ದಾರೆ.
ಡಿಡಿಸಿಎ ಮತ್ತು ಹಾಕಿ ಇಂಡಿಯಾದಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ತಾವು ಕಳೆದ ಸೆಪ್ಟೆಂಬರ್ನಲ್ಲಿ ಬರೆದಿರುವ ಪತ್ರವನ್ನು ಆಜಾದ್ ಬಿಡುಗಡೆಗೊಳಿಸಿದ್ದಾರೆ.
ಡಿಡಿಸಿಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳ ಕುರಿತಂತೆ ಹೇಳಿಕೆ ನೀಡುವ ದಿನಗಳು ದೂರವಿಲ್ಲ. ನಿಮ್ಮ ಅವಧಿಯಲ್ಲಿ ಕೇವಲ ಬೆಂಬಲಿಗರಿಗೆ ಲಾಭವಾಗಿದೆ. ಕ್ರಿಕೆಟ್ ಸಂಸ್ಥೆಯನ್ನು ಹಾಳುಗೆಡುವಲ್ಲಿ ಕಾರಣಿಭೂತರಾಗಿದ್ದೀರಿ ಎಂದು ಜೇಟ್ಲಿ ವಿರುದ್ಧ ಆಜಾದ್ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಚಿವ ಜೇಟ್ಲಿ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದು, ದೆಹಲಿ ಸಿಎಂ ಕೇಜ್ರಿವಾಲ್ ಸೇರಿದಂತೆ ಇತರ ಐವರು ಆಪ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸಚಿವ ಜೇಟ್ಲಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಆಜಾದ್, ಡಿಡಿಸಿಎಗೆ ಬೆಂಬಲಿತ ಆಡಿಟರ್ ನೇಮಕ ಮಾಡುವಂತೆ ಜೇಟ್ಲಿ ಡಿಡಿಸಿಎಗೆ ಅನಾಮಧೇಯ ಇ-ಮೇಲ್ ಕಳುಹಿಸಿದ್ದಲ್ಲದೇ ಆಜಾದ್ ಮತ್ತು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಂತೆ ರಹಸ್ಯ ಮಾಹಿತಿ ರವಾನಿಸಿದ್ದರು ಎಂದು ಆರೋಪಿಸಿದ್ದಾರೆ.