ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರಿಗಿಂತ ಮುಖ್ಯಮಂತ್ರಿ ರೇಸ್ನಲ್ಲಿ ಮುಂದಿದ್ದಾರೆ ಎನ್ನುವ ಸಮೀಕ್ಷೆಯನ್ನು ತರಾಟೆಗೆ ತೆಗೆದುಕೊಂಡ ಕರುಣಾನಿಧಿಯವರ ಬಂಡಾ ಪುತ್ರ ಎಂ.ಕೆ.ಅಳಗಿರಿ, ಒಂದು ವೇಳೆ ಸ್ಟಾಲಿನ್ನನ್ನು ಸಿಎಂ ಅಭ್ಯರ್ಥಿಯಾಗಿಸಿದಲ್ಲಿ ಮುಂಬರುವ ಚುನಾವಣೆಯಲ್ಲಿ ಪಕ್ಷ ಸೋಲುವುದು ಖಚಿತ ಎಂದು ಹೇಳಿದ್ದಾರೆ.
ತಮಿಳುನಾಡಿನ ಜನತೆ ಕೇವಲ ಕರುಣಾನಿಧಿಯವರಿಗೆ ಮತ ಹಾಕುತ್ತಾರೆ. ಸಮೀಕ್ಷೆಯಲ್ಲಿ ಸ್ಟಾಲಿನ್ ಸಂಬಂಧಿಕರಿರುವುದರಿಂದ ಅವರ ಪರವಾಗಿ ಸಮೀಕ್ಷೆ ನಡೆಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಕಳೆದ ವರ್ಷ ನಡೆದ ಲೋಕಸಭೆಯ ಚುನಾವಣೆಗೆ ಮುನ್ನವೇ ಅಳಗಿರಿಯನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಡಿಎಂಕೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಉಪಮುಖ್ಯಮಂತ್ರಿಯಾಗಿದ್ದ ಸ್ಟಾಲಿನ್ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಅಳಗಿರಿ, ಸಹೋದರನನ್ನು ಪಕ್ಷದ ಸಿಎಂ ಅಭ್ಯರ್ಥಿ ಎಂದು ಘೋಷಿಸಿದಲ್ಲಿ ಡಿಎಂಕೆ ಪಕ್ಷವನ್ನು ಸೋಲಿಸುವುದಾಗಿ ತಂದೆ, ಮಾಜಿ ಮುಖ್ಯಮಂತ್ರಿ ಕರುಣಾನಿಧಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು.
ಸ್ಟಾಲಿನ್ ಸಿಎಂ ಅಭ್ಯರ್ಥಿ ಎನ್ನುವ ಸಮೀಕ್ಷೆಗೆ ಬೆಂಬಲ ಸೂಚಿಸುತ್ತಿರುವ ನನ್ ತಂದೆ ಪಕ್ಷ ವಿನಾಶದ ಅಂಚಿಗೆ ತಂದು ನಿಲ್ಲಿಸಲಿದ್ದಾರೆ. ನನ್ನ ತಂದೆಯಂತೆ ಸ್ಟಾಲಿನ್ ರಾಜಕೀಯ ಪಟ್ಟುಗಳನ್ನು ಬಲ್ಲವರಲ್ಲ. ಮತ್ತು ಪರಿಶ್ರಮ ಜೀವಿ ಕೂಡಾ ಅಲ್ಲ ಎಂದು ಡಿಎಂಕೆ ಬಂಡಾಯ ನಾಯಕ ಎಂ.ಕೆ.ಅಳಗಿರಿ ವಾಗ್ದಾಳಿ ನಡೆಸಿದ್ದಾರೆ.