ಬಾಲಿವುಡ್ ಸ್ಟಾರ್ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರು ಚಪ್ಪಲಿ ಧರಿಸಿ ದೇವಸ್ಥಾನ ಪ್ರವೇಶಿಸಿದ ಪ್ರಕರಣಕ್ಕೆ ಸಂಬಂಧಸಿದಂತೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಾರ್ಚ್ 8 ರಂದು ವಿಚಾರಣೆಯನ್ನು ನಡೆಸಲಿದೆ.
ಹಿಂದೂ ಮಹಾಸಭಾ ಮಿರತ್ ವಿಭಾಗದ ಅಧ್ಯಕ್ಷ ಭರತ್ ರಜಪೂತ್ ಸಲ್ಲಿಸಿದ್ದ ಮರು ಅರ್ಜಿಯನ್ನು ಒಪ್ಪಿಕೊಂಡಿರುವ ಜಿಲ್ಲಾ ನ್ಯಾಯಾಧೀಶರು ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಮಾರ್ಚ್ 8 ಕ್ಕೆ ವಿಚಾರಣೆಯನ್ನು ನಿಗದಿ ಪಡಿಸಿದ್ದಾರೆ.
ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಈ ಹಿಂದೆ ಭರತ್ ಅವರು ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿದ್ದರು.
ಬಿಗ್ ಬಾಸ್ ರಿಯಾಲಿಟಿ ಶೋ ಚಿತ್ರೀಕರಣದ ಸಂದರ್ಭದಲ್ಲಿ ಶಾರುಖ್ ಮತ್ತು ಸಲ್ಮಾನ್ ಅವರು ಶೂ ಹಾಕಿಕೊಂಡು ಕಾಳಿ ದೇವಸ್ಥಾನಕ್ಕೆ ಪ್ರವೇಶಿಸುವುದರ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಈ ಕುರಿತು ನಾನು ಕಾರ್ಯಕ್ರಮದ ನಿರ್ದೇಶಕರಿಗೆ ಮತ್ತು ಟಿವಿ ಚಾನೆಲ್ ನಿರ್ವಹಣಾ ವಿಭಾಗಕ್ಕೆ ಪತ್ರ ಬರೆದಿದ್ದೆ. ಆದರೆ ಅವರು ಇದಕ್ಕೆ ಪ್ರತಿಕ್ರಿಯಿಸಲಿಲ್ಲ ಎಂದು ಭರತ್ ಆರೋಪಿಸಿದ್ದಾರೆ
ಧಾರ್ಮಿಕ ಸ್ಥಳಗಳಲ್ಲಿ ಯಾರು ಕೂಡ ಪಾದರಕ್ಷೆ ಧರಿಸಿ ಪ್ರವೇಶಿಸಬಾರದು, ಅಷ್ಟೇ ಅಲ್ಲದೆ ಅದನ್ನು ಟಿವಿಯಲ್ಲಿ ಪ್ರಸಾರ ಮಾಡಿರುವುದು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.