ಲೋಕಸಭಾ ಚುನಾವಣೆಯಲ್ಲಿ ಅತಿ ಕಳಪೆ ಪ್ರದರ್ಶನದ ಹೊಣೆಗಾರಿಕೆಯನ್ನು ಹೊತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ, ನಾವು ಅಂದುಕೊಂಡಷ್ಟು ಸಮರ್ಥನೆ ನಮಗೆ ಸಿಗಲಿಲ್ಲ. ಪ್ರಜಾಪ್ರಭುತ್ವದಲ್ಲಿ ಸೋಲು ಮತ್ತು ಗೆಲುವುಗಳು ಸಾಮಾನ್ಯ. ಈ ಚುನಾವಣೆಯಲ್ಲಿ ಜನಾಭಿಪ್ರಾಯ ನಮ್ಮ ವಿರುದ್ಧವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಾವು ನಮ್ಮ ಸಿದ್ಧಾಂತ ಮತ್ತು ನೀತಿಗಳ ಬಲದೊಂದಿಗೆ ಚುನಾವಣೆಯನ್ನೆದುರಿಸಿದೆವು. ಆದರೆ ಜನರು ನಮ್ಮ ಪರ ಮತ ನೀಡಲಿಲ್ಲ. ನಾವು ಈ ನಿರ್ಣಯವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇವೆ ಎಂದು ಸೋನಿಯಾ ಹೇಳಿದ್ದಾರೆ.
ನಾನು ಸೋಲಿನ ಜವಾಬ್ದಾರಿಯನ್ನು ಸ್ವೀಕರಿಸುತ್ತೇನೆ. ಹೊಸ ಸರಕಾರಕ್ಕೆ ಈಗಲೇ ಅಭಿನಂದನೆ ಸಲ್ಲಿಸುತ್ತೇನೆ. ಕಾಂಗ್ರೆಸ್ ಪರ ಕೆಲಸ ಮಾಡಿದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮತ್ತು ಮತದಾತರಿಗೂ ನನ್ನ ಧನ್ಯವಾದಗಳು ಎಂದು ಸೋನಿಯಾ ತಿಳಿಸಿದರು.
ನಾನು ನವಸರಕಾರಕ್ಕೆ ಶುಭಾಶಯ ಕೋರುತ್ತೇನೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರದರ್ಶನ ಅತಿ ಕಳಪೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಮತ್ತು ಅಪಜಯದ
ಜವಾಬ್ದಾರಿಯನ್ನು ಹೊರುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.