ನಗರದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಸ್ವಾಭಿಮಾನ್ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ, ಬಿಹಾರ್ ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ತಮ್ಮ ರಾಜಕೀಯ ಜೀವನದಲ್ಲಿಯೇ ಮೊದಲ ಬಾರಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಬಿಹಾರ್ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಎರಡು ಬಾರಿ ವೇದಿಕೆ ಹಂಚಿಕೊಂಡಿದ್ದ ಸೋನಿಯಾ, ನಿತೀಶ್ ಕುಮಾರ್ ಅವರೊಂದಿಗೆ ಮೊದಲ ಬಾರಿ ವೇದಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೆಡಿಯು, ಆರ್ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿಕೂಟ ಪ್ರಧಾನಿ ಮೋದಿಗೆ ತೀವ್ರ ಪೈಪೋಟಿ ನೀಡಲು ಸಿದದ್ತೆ ನಡೆಸಿವೆ ಎನ್ನಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಪ್ರಧಾನಿ ಮೋದಿ ಬಿಹಾರ್ ರಾಜ್ಯಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿ ಮತದಾರರನ್ನು ಓಲೈಸುವ ಯತ್ನದಲ್ಲಿದ್ದಾರೆ. ಬಿಹಾರ್ ರಾಜ್ಯಕ್ಕೆ ಮೊದಲ ಬಾರಿಗೆ ಎನ್ಡಿಎ ಮೈತ್ರಿಕೂಟ ಸರಕಾರ ರಚಿಸಲಿ ಎನ್ನುವುದು ಮೋದಿ ಗುರಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಗಮನಾರ್ಹ ವಿಷಯವೆಂದರೆ, ಬಿಹಾರ್ನಲ್ಲಿ ಕಾಂಗ್ರೆಸ್ ಅಥವಾ ಜನತಾ ಪರಿವಾರ ಪಕ್ಷಕ್ಕೆ ಸೇರಿದ ವ್ಯಕ್ತಿಗಳು ಮಾತ್ರ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ,ಬಿಜೆಪಿಯಿಂದ ಇಲ್ಲಿಯವರೆಗೆ ಯಾರು ಮುಖ್ಯಮಂತ್ರಿಗಳಾಗಿಲ್ಲ. ಇದೀಗ ಬಿಜೆಪಿ ವಿರುದ್ಧ ಹಣಾಹಣಿ ನಡೆಸಲು ಎಲ್ಲಾ ಜಾತ್ಯಾತೀತ ಪಕ್ಷಗಳು ಒಗ್ಗೂಡಿವೆ.