Select Your Language

Notifications

webdunia
webdunia
webdunia
webdunia

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಹಿರಿಯ ಗಾಂಧಿವಾದಿ

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಹಿರಿಯ ಗಾಂಧಿವಾದಿ
ತುಮಕೂರು , ಭಾನುವಾರ, 25 ಜನವರಿ 2015 (17:24 IST)
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಅಣ್ಣಾ ಹಜಾರೆ ಅವರು ಭಾನುವಾರ ಡಾ. ಶಿವಕುಮಾರ್ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
 
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಿಷ್ಯದ ಮಕ್ಕಳಿಂದ ದೇಶದ ಉದ್ದಾರವಾಗುತ್ತದೆ ಹೊರತು ರಾಜಕೀಯದವರಿಂದಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
 
ಇತ್ತೀಚೆಗೆ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಇದರಿಂದ ದೇಶದ ಅಭಿವೃದ್ಧಿ ಕುಗ್ಗಿದೆ. ಭ್ರಷ್ಟಾಚಾರವನ್ನು ಹತ್ತಿಕ್ಕಬೇಕಾದರೆ ದೇಶದ ಯುವಜನತೆ ಮತ್ತು ಭವಿಷ್ಯದ ಮಕ್ಕಳು ಜಾಗೃತರಾಗಿರಬೇಕು ಎಂದು ಕರೆ ನೀಡಿದ್ದಾರೆ.
 
ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನದಾನ ಮಾಡುತ್ತಿರುವ ಶ್ರೀಗಳ ಸೇವೆ ನಿಜಕ್ಕೂ ಶ್ಲಾಘನೀಯ ಎಂದ ಅವರು, ಸ್ವಾಮೀಜಿಯವರಿಗೆ ಇನ್ನಷ್ಟು ಆಯಸ್ಸು ಆರೋಗ್ಯ ನೀಡಲಿ ಎಂದರು.
 
ದೆಹಲಿ ಚುನಾವಣೆ ಸಂಬಂಧ ಕಿರಣ್‌ಬೇಡಿ ಮತ್ತು ಕೇಜ್ರಿವಾಲ್ ಬಗ್ಗೆ ನಿಮ್ಮ ಅಭಿಪ್ರಾಯವೇನೆಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಿರಣ್ ಬೇಡಿ ಅವರು ಉತ್ತಮ ವ್ಯಕ್ತಿ. ಅವರ ಬಗ್ಗೆ ನಮಗೆ ಗೌರವವಿದೆ ಹಾಗೆ, ಕೇಜ್ರಿವಾಲ್ ಬಗ್ಗೆಯೂ ಅದೇ ಅಭಿಪ್ರಾಯವಿದೆ ಎಂದು ತಿಳಿಸಿದ್ದಾರೆ.
 
ಬಳ್ಳಾರಿಗೆ ಭೇಟಿ ನೀಡಿ ಗೌರವ ಡಾಕ್ಟರೇಟ್ ಪಡೆದ ಬಳಿಕ ಶಿವಕುಮಾರ್ ಸ್ವಾಮೀಜಿ ಆರ್ಶೀವಾದ ಪಡೆಯಲೆಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಆದರೆ, ನಿನ್ನೆ ಶ್ರೀಗಳನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಅಲ್ಲಿಯೇ ಉಳಿದುಕೊಂಡಿದ್ದ ಅಣ್ಣಾ ಹಜಾರೆ ಅವರು, ಇಂದು ಸಿದ್ದಗಂಗಾ ಸ್ವಾಮೀಜಿಯವನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

Share this Story:

Follow Webdunia kannada