ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಶೀನಾ ಬೋರಾಳ ತಂದೆ ಎಂದು ಹೇಳಿಕೆ ನೀಡಿದ್ದ ಸಿದ್ಧಾರ್ಥ ದಾಸ್, ಇದೀಗ ಕುಟುಂಬ ಸಮೇತ ಕಾಣೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಶೀನಾ ಬೋರಾಳ ಹತ್ಯೆಯಲ್ಲಿ ಅವಳ ತಾಯಿ ಇಂದ್ರಾಣಿ ಮುಖರ್ಜಿ, ಮಲತಂದೆ ಸಂಜೀವ್ ಖನ್ನಾ ಮತ್ತು ಶ್ಯಾಮ್ ರೈ ಪಾತ್ರ ಕುರಿತಂತೆ ಮುಂಬೈ ಪೊಲೀಸರು ಸಿದ್ಧಾರ್ಥ ದಾಸ್ನನ್ನು ವಿಚಾರಣೆ ನಡೆಸಿದ್ದರು. ವಿಚಾರಣೆ ನಡೆಸಿದ ಮಾರನೇ ದಿನವೇ ದಾಸ್ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಿದ್ಧಾರ್ಥ ದಾಸ್ ಕುಟುಂಬದ ಸದಸ್ಯರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಮನೆಯಿಂದ ಹೊರಗೆ ಬಾರದಿರುವುದು ನೆರೆಮನೆಯವರಲ್ಲಿ ಮತ್ತು ಮನೆಯ ಮಾಲೀಕರಿಗೆ ಅನುಮಾನ ಮೂಡಿಸಿತ್ತು. ಕೊನೆಗೆ ಮನೆಯ ಬಾಗಿಲು ಮುರಿದು ನೋಡಿದಾಗ ಮನೆ ಖಾಲಿಯಾಗಿರುವುದು ಕಂಡುಬಂದಿದೆ. ದಾಸ್ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿರುವುದು ಪೊಲೀಸರ ಆತಂಕಕ್ಕೆ ಕಾರಣವಾಗಿದೆ.
ಕೋಲ್ಕತಾದ ಡುಂ ಡುಂ ಬಳಿಯಿರುವ ದುರ್ಗಾನಗರ್ನಲ್ಲಿ ಸಿದ್ಧಾರ್ಥ್ ದಾಸ್ ತನ್ನ ಪತ್ನಿ ಬಬ್ಲಿ ದಾಸ್ರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ.
ಮುಂಬೈ ಪೊಲೀಸರು ವಿಚಾರಣೆ ನಡೆಸಿದ ನಂತರ ಕೋಲ್ಕತಾ ಪೊಲೀಸರು ಕೂಡಾ ಸಿದ್ಧಾರ್ಥ್ ದಾಸ್ ವಿಚಾರಣೆಗಾಗಿ ಅವರ ಮನೆಗೆ ತೆರಳಿದ್ದಾಗ, ಮನೆ ಖಾಲಿ ಮಾಡಿ ದಾಸ್ ನಾಪತ್ತೆಯಾಗಿರುವುದು ಪೊಲೀಸರಲ್ಲಿ ಹಲವು ಸಂಶಯಗಳು ಮೂಡಿಸಿವೆ.