ರೈಲ್ವೆ ಖಾತೆಗೆ ಸಂಬಂಧಿಸಿದ ಪ್ರಶ್ನೆಯನ್ನು ಲೋಕಸಭೆಯಲ್ಲಿ ಎತ್ತಿದಾಗ ರಾಜ್ಯ ಖಾತೆ ಸಚಿವ ಮನೋಜ್ ಸಿನ್ಹಾ ಗೈರಾಗಿದ್ದರಿಂದ ಅವರ ವಿರುದ್ಧ ಪ್ರತಿಪಕ್ಷದ ಸದಸ್ಯರು ಕೋಪದಿಂದ ಘೋಷಣೆಗಳನ್ನು ಕೂಗಿದರು. ಆಗ ಕೆರಳಿದ ಸ್ಪೀಕರ್ ಸುಮಿತ್ರಾ ಮಹಾಜನ್ ನಾನೇನು ಮಾಡಲಿ, ಅವರನ್ನು ಗಲ್ಲಿಗೆ ಹಾಕಲೇ ಎಂದು ಕೇಳಿದರು.
ಮನೋಜ್ ಸಿನ್ಹಾ ಅವರು ಬೆಳಿಗ್ಗೆ ಸದನದಲ್ಲಿ ಹಾಜರಿದ್ದರು. ಆದರೆ ಮಧ್ಯಾಹ್ನ ತಮ್ಮ ಪ್ರಶ್ನೆಯನ್ನು ಎತ್ತಿಕೊಳ್ಳುವುದಿಲ್ಲ ಎಂಬ ಊಹೆ ಮೇಲೆ ನಿರ್ಗಮಿಸಿದ್ದರು. ಮಧ್ಯಾಹ್ನ ನಾಲ್ಕೈದು ಪ್ರಶ್ನೆಗಳನ್ನು ಮಾತ್ರ ಕೇಳಲಾಗುತ್ತದೆ.
ಕಾಂಗ್ರೆಸ್ ಸದಸ್ಯರು ಮಾತ್ರ ಟೀಕೆಗಳ ಸುರಿಮಳೆಯನ್ನೇ ಸುರಿಸಿದಾಗ ಸಂಸದೀಯ ವ್ಯವಹಾರ ಸಚಿವ ವೆಂಕಯ್ಯ ನಾಯ್ಡು ವಿವರಣೆ ನೀಡಲು ಪ್ರಯತ್ನಿಸಿದರು.
ಸಿನ್ಹಾ ಬೆಳಿಗ್ಗೆ ಹಾಜರಾಗಿದ್ದರು. ಆದರೆ ತಮ್ಮ ಪ್ರಶ್ನೆಯನ್ನು ಪುನಃ ಕೇಳಲಾಗುವುದಿಲ್ಲ ಎಂದು ಊಹಿಸಿಕೊಂಡು ಗೈರಾಗಿದ್ದಾರೆ. ಇಂತಹ ಘಟನಗಳು ಮರುಕಳಿಸಬಾರದು ಎಂದು ನಾಯ್ಡು ಸಚಿವರ ಗೈರುಹಾಜರಿಗೆ ಕ್ಷಮೆ ಕೋರುತ್ತಾ ಹೇಳಿದರು. ಸ್ಪೀಕರ್ ಕೂಡ ಅದಕ್ಕೆ ದನಿಗೂಡಿಸಿ ಇಂತಹ ಪ್ರಸಂಗ ಮುಂದೆ ಜರುಗಬಾರದು. ಕಲಾಪದ ಕೊನೆಯವರೆಗೆ ಸಚಿವರು ಕುಳಿತಿರಬೇಕು ಎಂದು ಹೇಳಿದರು.