ಇದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ. ಬಿಹಾರಿನ ಪಂಚಾಯತ್ ಒಂದು ಅತ್ಯಾಚಾರ ಆರೋಪಿ ಬಳಿ, ಪೀಡಿತೆಗೆ 41, 000 ರೂಪಾಯಿ ನೀಡುವಂತೆ ಆದೇಶಿಸಿದೆ ಮತ್ತು ಪೀಡಿತೆಗೆ ಆ ಹಣವನ್ನು ಪಡೆದುಕೊಂಡು ಅತ್ಯಾಚಾರ ನಡೆದಿರುವ ಸಂಗತಿಯನ್ನು ಮರೆತು ಬಿಡು ಎಂದು ತೀರ್ಪು ನೀಡಿದೆ.ಆರೋಪಿ ಕೂಡ ಪಂಚಾಯತ್ ಸದಸ್ಯನಾಗಿದ್ದಾನೆ.
ಕತಿಹಾರ್ ಜಿಲ್ಲೆಯ ಕೊಧಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪಂಚಾಯತ್ ಒಂದು ಈ ಅನ್ಯಾಯದ ತೀರ್ಪನ್ನು ನೀಡಿದೆ.
ಊರಿನಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿರುವ ಆರೋಪಿ ದಂಡವನ್ನು ಪಾವತಿಸಲು ಕೂಡ ನಿರಾಕರಿಸಿದ್ದಾನೆ. ಆತ ಹಣವನ್ನು ನೀಡಲು ನಿರಾಕರಿಸಿದಾಗ ಪೀಡಿತೆ ಪ್ರತಿಭಟನೆಗಿಳಿದಿದ್ದಾಳೆ. ಆಗ ಕ್ರೋಧಿತನಾದ ಆರೋಪಿ ಆಕೆಯ ಗಂಡನಿಗೆ ಬೆಂಕಿ ಹಚ್ಚಿದ್ದಾನೆ. ಪೀಡಿತೆಯ ಪತಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಕಳೆದ ತಿಂಗಳು ಈ ಘಟನೆ ನಡೆದಿದ್ದು, ಇಂದಿರಾ ಆವಾಸ್ ಯೋಜನೆಗೆ ಅವಶ್ಯವಾಗಿರುವ ದಾಖಲೆಗಳನ್ನು ಸಿದ್ಧಪಡಿಸಲು ಆರೋಪಿ ಪ್ರಕಾಶ್ ಪೀಡಿತೆಯನ್ನು ಪಂಚಾಯತ್ ಕಟ್ಟಡಕ್ಕೆ ಬರುವಂತೆ ಕರೆದಿದ್ದ. ಅಲ್ಲಿಗೆ ಒಬ್ಬಳೇ ಬಂದಿದ್ದ ಆಕೆಯ ಮೇಲೆರಗಿ ಆತ ಅತ್ಯಾಚಾರ ಎಸಗಿದ್ದಾನೆ ಮತ್ತು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಘೋರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದ ಎಂದು ವರದಿಯಾಗಿದೆ.
ಪಂಚಾಯತ್ ತೀರ್ಪಿನಿಂದ ಮತ್ತು ತನ್ನ ಗಂಡನ ಮೇಲೆ ಆಗಿರುವ ದೌರ್ಜನ್ಯದ ವಿರುದ್ಧ ಪೀಡಿತೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.