ದೇಶದ ಕೆಲ ರಾಜ್ಯಗಳಲ್ಲಿ ವರುಣ ಆರ್ಭಟಿಸುತ್ತಿದ್ದು, ಭಾರೀ ಮಳೆಯಾಗುತ್ತಿರುವ ಮಧ್ಯಪ್ರದೇಶದಲ್ಲಿ ಉಕ್ಕೇರಿ ರಸ್ತೆಯ ಮೇಲೆ ಹರಿಯುತ್ತಿದ್ದ ನದಿಯ ನೀರಿನಲ್ಲಿ ಬೈಕ್ ಚಲಾಯಿಸಿಕೊಂಡು ಹೋದ ಯುವಕನೊಬ್ಬ ಕೊಚ್ಚಿ ಹೋಗಿರುವ ಕರುಣಾಜನಕ ಘಟನೆ ವರದಿಯಾಗಿದೆ.
ಪ್ರತ್ಯಕ್ಯದರ್ಶಿಗಳೊಬ್ಬರು ಈ ಘಟನೆಯ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಇದೀಗ ಅದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ತಡೆಗೋಡೆಯಿಲ್ಲದ ಸೇತುವೆಯ ಮೇಲೆ ನದಿ ನೀರು ಹರಿಯುತ್ತಿರುವುದನ್ನು ನೋಡುತ್ತಾ ಅನೇಕ ಜನ ನದಿಯ ಇಕ್ಕೆಲಗಳಲ್ಲಿ ನಿಂತಿದ್ದರು. ಆ ಸಮಯದಲ್ಲಿ ಬೈಕ್ ಮೇಲೆ ಅಲ್ಲಿಗೆ ಬಂದ ಯುವಕ ಸ್ವಲ್ಪ ಸಮಯ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ . ಒಮ್ಮೆಲೆ ಸ್ಟಂಟ್ ಮಾಡೋ ಹುಮ್ಮಸ್ಸಿನಲ್ಲಿ, ನೀರಿನ ಜತೆ ಪೈಪೋಟಿಗಿಳಿದ. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ಚಲಾಯಿಸಿದ ಆತ ಎಲ್ಲರೂ ನೋಡುತ್ತಿರುವಂತೆ ನೀರಿನ ಸೆಳೆತದಲ್ಲಿ ಕೊಚ್ಚಿ ಹೋದ.
ಇನ್ನೇನು ಆತ ಆ ಬದಿಗೆ ಮುಟ್ಟಲು ಸ್ವಲ್ಪ ಅಂತರವಿದೆ ಅನ್ನುವಷ್ಟರಲ್ಲಿ ಮೇಲೇರಿ ಬಂದ ನೆರೆ ನೀರು ಆತನನ್ನು ಬೈಕ್ ಸಮೇತ ಸೆಳೆದುಕೊಂಡು ಹೋಗುವ ದೃಶ್ಯ ಭಯಾನಕವಾಗಿದೆ.
ಆತನ ದುರ್ಮರಣವನ್ನು ಅಲ್ಲಿ ನಿಂತಿದ್ದ ಜನ ಅಸಹಾಯಕರಾಗಿ ನೋಡುತ್ತಿದ್ದರು. ಆತ ಮದ್ಯದ ಅಮಲಿನಲ್ಲಿ ಆ ದುಸ್ಸಾಹಸಕ್ಕೆ ಕೈ ಹಾಕಿದ ಎಂದು ಹೇಳಲಾಗುತ್ತಿದೆ.