ಮೋದಿ ಸರ್ಕಾರದ ವರ್ಷಾಚರಣೆ ತನಗೆ ಸಂಬಂಧವೇ ಇಲ್ಲವೆಂಬಂತೆ ಪಕ್ಷ ಶಿವಸೇನೆ ಕಡೆಗಣಿಸಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಕೂಡ ಈ ಕುರಿತು ಪ್ರಸ್ತಾಪಿಸದ ಶಿವಸೇನೆ ತಮ್ಮ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸೂಚ್ಯವಾಗಿ ತೋರ್ಪಡಿಸಿದೆ.
ಮುಂಬೈನ ಬಹುತೇಕ ಎಲ್ಲ ಸುದ್ದಿ ಪತ್ರಿಕೆಗಳು ಮೋದಿ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಲೇಖನಗಳನ್ನು, ವರದಿಯನ್ನು ಪ್ರಕಟಿಸಿದ್ದವು. ಆದರೆ, ಮೋದಿ ಅವರು ಮಥುರಾದಲ್ಲಿ ನಡೆಸಿದ ಬೃಹತ್ ಮೆರವಣಿಗೆ ಕುರಿತು ಚಿಕ್ಕ ಸುದ್ದಿಯನ್ನು ಹೊರತುಪಡಿಸಿ, 'ಸಾಮ್ನಾ'ದಲ್ಲಿ ಸರ್ಕಾರದ ಮೊದಲ 365 ದಿನಗಳ ಅವಲೋಕನ ಮಾಡಿ ಯಾವುದೇ ವರದಿಯನ್ನು ಪ್ರಕಟಿಸಲಾಗಿಲ್ಲ.
ತಾವು ಕೂಡ ಸರಕಾರದ ಭಾಗವಾಗಿದ್ದರು ಕೂಡ ಮೋದಿ ಸರಕಾರದ ಕಾರ್ಯವೈಖರಿಯ ಕುರಿತು ಶಿವಸೇನೆ ತೃಪ್ತಿಯನ್ನು ಹೊಂದಿಲ್ಲ. ಭೂ ಸ್ವಾಧೀನ ಮಸೂದೆ, ಜೀವವಿಮೆಯಲ್ಲಿ ಎಫ್ಡಿಐ ಸೇರಿದಂತೆ ಜೈತಾಪುರ್ ಪರಮಾಣು ಶಕ್ತಿ ಯೋಜನೆ ಕುರಿತು ಸೇನೆ ಬಹಿರಂಗವಾಗಿ ವಿರೋಧ ವ್ಯಕ್ತ ಪಡಿಸಿದೆ.
ಮೋದಿಯವರ ಇತ್ತೀಚಿಗೆ ಮಂಗೋಲಿಯಾಕ್ಕೆ ಹಣಕಾಸಿನ ನೆರವು ನೀಡಿದ್ದನ್ನು ಕೂಡ ಪ್ರಶ್ನಿಸಿದ್ದ ಸೇನೆ ಮೋದಿಯವರು ರೈತರ ಆತ್ಮಹತ್ಯೆ ಸೇರಿದಂತೆ ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿತ್ತು.