ಏರಿಂಡಿಯಾ ವಿಮಾನ ವಿಳಂಬಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವಂದ್ರ ಫಡ್ನವೀಸ್ ವಿರುದ್ಧ ಎನ್ಡಿಎ ಮೈತ್ರಿಕೂಟದ ಪಕ್ಷವಾದ ಶಿವಸೇನೆ ವಾಗ್ದಾಳಿ ನಡೆಸಿದೆ.
ಸಾಮಾನ್ಯ ಅಂಗವಿಕಲ ವ್ಯಕ್ತಿಯೊಬ್ಬನಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನೀವೀಸ್ ಇಂತಹ ರಿಯಾಯಿತಿ ನೀಡುತ್ತಾರೆಯೇ ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಕಿಡಿಕಾರಿದೆ.
ಇದೊಂದು ಗಂಭೀರ ವಿಷಯವಾಗಿದ್ದು, ಒಂದು ವೇಳೆ ಅಂಗವಿಕಲ ವ್ಯಕ್ತಿಯೊಬ್ಬ ವೀಸಾ ಪಾಸ್ಪೋರ್ಟ್ ದಾಖಲೆಗಳನ್ನು ಮರೆತು ವಿಮಾನ ನಿಲ್ದಾಣಕ್ಕೆ ಬಂದಲ್ಲಿ ಏರಿಂಡಿಯಾ ಸಂಸ್ಥೆ ಫಡ್ನವೀಸ್ಗೆ ನೀಡಿದಂತೆ ಗೌರವ ನೀಡುತ್ತದೆಯೇ ಎಂದು ಪ್ರಶ್ನಿಸಿದೆ
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ಸಿಎಂ ಪದವಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಕೂಡಾ ವಾಗ್ದಾಳಿ ನಡೆಸಿದೆ.
ಕಳೆದ ಜೂನ್ 29 ರಂದು ಫಡ್ನವೀಸ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪರದೇಶಿ ಸೇರಿದಂತೆ ಇತರ ಎಂಟು ಮಂದಿ ಅಧಿಕಾರಿಗಳು ವಾರದ ಅವಧಿಯ ಅಮೆರಿಕ ಪ್ರವಾಸಕ್ಕೆ ಹೊರಟಿದ್ದರು. ಆದರೆ, ಮುಖ್ಯಮಂತ್ರಿ ಫಡ್ನವೀಸ್ ಅವರ ಹೊಸ ಪಾಸ್ಪೋರ್ಟ್ ಮತ್ತು ವೀಸಾ ತರಲು ಕಾರ್ಯದರ್ಶಿಗಳು ಮರೆತಿದ್ದರು. ಮತ್ತೆ ಫಡ್ನವೀಸ್ ನಿವಾಸಕ್ಕೆ ತೆರಳಿ ಹೊಸ ಪಾಸ್ಪೋರ್ಟ್ ಮತ್ತು ವೀಸಾ ತೆಗೆದುಕೊಂಡ ಬಂದ ಕಾರ್ಯದರ್ಶಿಗಳು ವಿಮಾನ ಅಧಿಕಾರಿಗಳಿಗೆ ನೀಡಿದರು. ಫಡ್ನವೀಸ್ ಅವರ ಸಮಸ್ಯೆಯಿಂದ ಅಮೆರಿಕಗೆ ತೆರಳಬೇಕಿದ್ದ ವಿಮಾನ ಸುಮಾರು ಒಂದು ಗಂಟೆ ವಿಳಂಬವಾಗಿರುವುದು ವಿಪಕ್ಷಗಳ ಟೀಕೆಗೆ ಕಾರಣವಾಗಿದೆ.