ಭಾರತೀಯ ಪತ್ರಿಕಾ ಮಂಡಳಿ ಮಾಜಿ ಅಧ್ಯಕ್ಷ ಮಾರ್ಕಾಂಡೇಯ್ ಕಟ್ಜು ಮತ್ತೆ ಪುನಃ ವಿವಾದಕ್ಕೆ ಈಡಾಗಿದ್ದಾರೆ. ಕೆಲವು ದಿನಗಳ ಹಿಂದೆ 90 ಪ್ರತಿಶತ ಭಾರತೀಯರು ಮೂರ್ಖರು ಎಂದಿದ್ದ ಅವರು ಕಿರಣ್ ಬೇಡಿ ಬದಲಾಗಿ ಶಾಜಿಯಾ ಇಲ್ಮಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಬಿಜೆಪಿ ನಿಸ್ಸಂದೇಹವಾಗಿಯೂ ದೆಹಲಿ ಚುನಾವಣೆಯನ್ನು ಗೆಲ್ಲಲಿದೆ ಎಂದು ಟ್ವಿಟ್ ಮಾಡುವುದರ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.
ಬಹುಶಃ ಸುಂದರ ಮುಖಗಳನ್ನು ಬಹಳ ಇಚ್ಛೆ ಪಡುವ ಕಟ್ಜು,"ಕಿರಣ್ ಬೇಡಿಗಿಂತ ಶಾಜಿಯಾ ಇಲ್ಮಿ ಬಹಳ ಸುಂದರವಾಗಿದ್ದಾರೆ ಎಂಬುದು ನನ್ನ ಅನಿಸಿಕೆ. ಶಾಜಿಯಾ ಅವರನ್ನು ತಮ್ಮ ಪಕ್ಷದ ಮುಖ್ಯಮಂತ್ರಿಯನ್ನಾಗಿ ಘೋಷಿಸಿದರೆ ಖಂಡಿತವಾಗಿಯೂ ಬಿಜೆಪಿ ದೆಹಲಿಯಲ್ಲಿ ಗೆಲುವನ್ನು ದಾಖಲಿಸಲಿದೆ", ಎಂದು ಹೇಳಿದ್ದಾರೆ.
ಈ ಮೊದಲು ಕಟ್ಜು ಕತ್ರಿನಾ ಕೈಫ್ ಭಾರತದ ರಾಷ್ಟ್ರಪತಿಯಾಗಬೇಕು ಎಂದು ಹೇಳಿದ್ದರು.
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಮಾಜಿ ನ್ಯಾಯಮೂರ್ತಿ ಕ್ರೊಯೇಷಿಯಾದಲ್ಲಿ ಜನರು ಸುಂದರ ಮುಖಗಳಿಗೆ ಮತ ನೀಡುವುದನ್ನು ಉಲ್ಲೇಖಿಸಿದ್ದಾರೆ. ಮತ ಹಾಕಲು ಬಯಸದ ನನ್ನಂತವರೂ ಸಹ ಶಾಜಿಯಾ ಅವರಿಗೆ ಮತ ನೀಡಲು ಧಾವಿಸಿ ಬರಬಹುದು ಎಂದು ಟ್ವಿಟ್ ಮಾಡಿದ್ದಾರೆ.
ಅವರ ಈ ಟ್ವಿಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ವಿರೋಧಕ್ಕೆ ಪ್ರತಿಕ್ರಿಯಿಸಿರುವ ಅವರು 'ಹಾಸ್ಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ. ನನ್ನ ಈ ಟ್ವಿಟ್ ಹಗುರವಾದ ಧಾಟಿಯಲ್ಲಿ ಹೇಳಲ್ಪಟ್ಟಿದ್ದು. ನಾನದನ್ನು ತಮಾಷೆಗೆ ಹೇಳಿದ್ದೆ'. ಎಂದು ಹೇಳಿದ್ದಾರೆ.