Select Your Language

Notifications

webdunia
webdunia
webdunia
webdunia

ಪ್ರೀತಿಯ ಸ್ನೇಹಿತರಾದ ನಿತೀಶ್, ಲಾಲು ಅವರನ್ನು ಭೇಟಿಯಾದ ಶತ್ರುಘ್ನ ಸಿನ್ಹಾ

ಪ್ರೀತಿಯ ಸ್ನೇಹಿತರಾದ ನಿತೀಶ್, ಲಾಲು ಅವರನ್ನು ಭೇಟಿಯಾದ ಶತ್ರುಘ್ನ ಸಿನ್ಹಾ
ನವದೆಹಲಿ , ಬುಧವಾರ, 10 ಫೆಬ್ರವರಿ 2016 (16:04 IST)
ಬಿಹಾರ್ ಚುನಾವಣೆಯ ಸಂದರ್ಭದಲ್ಲಿ ತಮ್ಮನ್ನು ಕಡೆಗಣಿಸಿದ್ದಕ್ಕೆ ತಮ್ಮದೇ ಪಕ್ಷ ಬಿಜೆಪಿಯೊಂದಿಗೆ ಕಹಿ ಸಂಬಂಧವನ್ನು ಬೆಳೆಸಿಕೊಂಡಿರುವ ಬಾಲಿವುಡ್ ನಟ ಪರಿವರ್ತಿತ ರಾಜಕಾರಣಿ ಶತ್ರುಘ್ನ ಸಿನ್ಹಾ ತಮ್ಮ ಪ್ರೀತಿಯ ಸ್ನೇಹಿತರಾದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ.

 
ಬಿಹಾರದ ಪಾಟ್ಣಾ ಸಾಹೀಬ್ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಸಿನ್ಹಾ  ತಮ್ಮ ಹಿರಿಯ ಸಹೋದರ ಲಖನ್ ಸಿನ್ಹಾ ಜತೆಯಲ್ಲಿ ಪಾಟ್ಣಾ ವಿಮಾನ ನಿಲ್ದಾಣದಲ್ಲಿ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿಯಾಗಿದ್ದರು. ಆ ಸಮಯದಲ್ಲಿ ಲಾಲು ಪತ್ನಿ, ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಸಹ ಜತೆಗಿದ್ದರು. ಕುಶಲೋಪರಿ ಮಾತನಾಡಿಕೊಂಡ ಗಣ್ಯರು ಜತೆಗೆ ನಿಂತು ಭಾವಚಿತ್ರವನ್ನು ಸಹ ತೆಗೆಸಿಕೊಂಡರು.
 
ತಮ್ಮನ್ನು ಕಡೆಗಣಿಸಿದ್ದಕ್ಕೆ ತಮ್ಮದೇ ನಾಯಕತ್ವದ ವಿರುದ್ಧ ಏಕಾಂಗಿಯಾಗಿ ತೊಡೆ ತಟ್ಟಿರುವುದಕ್ಕೆ ಲಾಲು ಸಿನ್ಹಾ ಅವರ ಬೆನ್ನು ತಟ್ಟಿದರು ಎಂದು ಆ ಸಂದರ್ಭದಲ್ಲಿ ಸಿನ್ಹಾ ಜತೆಗಿದ್ದ ಅವರ ಆಪ್ತರೊಬ್ಬರು ತಿಳಿಸಿದ್ದಾರೆ.
 
ಲಾಲು ಭೇಟಿಯಾದ ಬೆನ್ನಲ್ಲೇ ಸಿನ್ಹಾ ಮದುವೆ ಸಮಾರಂಭವೊಂದರಲ್ಲಿ  ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಹ ಭೇಟಿಯಾದರು. ಇಬ್ಬರು ನಾಯಕರು ತಮ್ಮ ಸೌಹಾರ್ದಯುತ ಭೇಟಿಯಲ್ಲಿ ಹಳೆಯ ನೆನಪುಗಳನ್ನು ಹಂಚಿಕೊಂಡರು ಎಂದು ತಿಳಿದು ಬಂದಿದೆ. 
 
ಭೇಟಿಯ ಸಂದರ್ಭದಲ್ಲಿ ನಿತೀಶ್ ಕುಮಾರ್, ಚುನಾವಣೆಯ ಸಂದರ್ಭಗಳೇ ಒಳ್ಳೆಯದಿದ್ದವು, ಆಗ ನಾವು ಪದೇ ಪದೇ ಭೇಟಿಯಾಗುತ್ತಿದ್ದೆವು. ನಾವು ಆಗಾಗ ಹೀಗೆ ಭೇಟಿಯಾಗುತ್ತಿರಬೇಕು ಎಂಬ ಆಶಯವನ್ನು ವ್ಯಕ್ತ ಪಡಿಸಿದರು ಎಂದು ಹೇಳಲಾಗುತ್ತಿದೆ. 
 
ಬಿಜೆಪಿ ಶತ್ರುಗಳಾದ ಲಾಲು ಮತ್ತು ನಿತೀಶ್ ಜತೆ ಸೌಹಾರ್ದ ಭೇಟಿಯ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಸಿನ್ಹಾ, ಒಮ್ಮೆ ಸ್ನೇಹಿತರಾದವರು ಸದಾ ಸ್ನೇಹಿತರಾಗಿರುತ್ತಾರೆ. ನಾವು ಹಲವು ವರ್ಷಗಳಿಂದ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಇದನ್ನು ಕೇವಲ ರಾಜಕೀಯ ದೃಷ್ಟಿಯಲ್ಲಿ ನೋಡಬಾರದು ಎಂದು ಹೇಳಿದ್ದಾರೆ. 
 

Share this Story:

Follow Webdunia kannada