ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಮತ್ತು ಇತರ ಮೂವರು ವಿರುದ್ಧದ ಹೈಕೋರ್ಟ್ ತೀರ್ಪಿಗೆ ತಡೆನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ನ್ಯಾಯಮೂರ್ತಿ ಪಿ.ಸಿ.ಘೋಸೆ ಮತ್ತು ಆರ್.ಕೆ.ಆಗರ್ವಾಲ್ ನೇತೃತ್ವದ ನ್ಯಾಯಪೀಠ, ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ, ಮತ್ತು ಅವರ ಆತ್ಮಿಯ ಗೆಳತಿ ಶಶಿಕಲಾ ಹಾಗೂ ಇಬ್ಬರು ಸಂಬಂಧಿಕರಾದ ವಿ.ಎನ್.ಸುಧಾಕರನ್ ಮತ್ತು ಇಳವರಿಸಿಯವರಿಗೆ ನೋಟಿಸ್ ಜಾರಿ ಮಾಡಿ ಎಂಟು ವಾರಗಳೊಳಗಾಗಿ ಉತ್ತರಿಸುವಂತೆ ಆದೇಶಿಸಿದೆ.
ಕರ್ನಾಟಕ ಸರಕಾರ, ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಮತ್ತು ಡಿಎಂಕೆ ನಾಯಕ ಕೆ,ಅನ್ಬಳಗನ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ಮೇ 11 ರಂದು ಜಯಲಲಿತಾರ ಐದು ವರ್ಷ ಶಿಕ್ಷೆಯನ್ನು ರದ್ದುಪಡಿಸಿರುವ ಹೈಕೋರ್ಟ್ ಆದೇಶದ ತೀರ್ಪಿನ ಬಗ್ಗೆ ಮಧ್ಯಪ್ರವೇಶಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಹಿರಿಯ ವಕೀಲರು ಮತ್ತು ಸರಕಾರದ ವಿಶೇಷ ಅಭಿಯೋಜಕರಾದ ಬಿ.ವಿ.ಆಚಾರ್ಯ ಕೂಡಾ ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದಾರೆ. ಅನ್ಬಳಗನ್ ಪರವಾಗಿ ಟಿ.ಆರ್. ಅಂಧ್ಯಾರುಜಿನಾ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡುವುದಾಗಿ ನ್ಯಾಯಪೀಠ ತಿಳಿಸಿದೆ.