ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ಒಬ್ಬ ಮಹಾನ್ ದೇಶ ಭಕ್ತ ಎಂದು ಹೊಗಳುವುದರ ಮೂಲಕ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೊಸದೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ನಾಥುರಾಮ್ ಗೋಡ್ಸೆ ನಿಜವಾದ ದೇಶಪ್ರೇಮಿಯಾಗಿದ್ದರು. ದೇಶ ವಿಭಜನೆಯಾದ ನೋವು ಅವರನ್ನು ಬಹುವಾಗಿ ಕಾಡಿತ್ತು ಎಂದು ಅವರು ಹೇಳಿದ್ದಾರೆ.
ತಮ್ಮ ಪಕ್ಷದ ಸಂಸದ ಸಾಕ್ಷಿ ಮಹಾರಾಜ್ರ ಹೇಳಿಕೆಯಿಂದ ಇರಿಸು ಮುರಿಸು ಅನುಭವಿಸುತ್ತಿರುವ ಎನ್ಡಿಎ ಸರ್ಕಾರ, ಮಹಾತ್ಮಾ ಗಾಂಧಿ ಹಂತಕರನ್ನು ತಾವು ಎಂದಿಗೂ ಬೆಂಬಲಿಸುವದಿಲ್ಲ ಎಂದು ಹೇಳುವುದರ ಮೂಲಕ ಅಂತರ ಕಾಯ್ದುಕೊಂಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಸಂಸದರ ಹೇಳಿಕೆ ಅವರ ವೈಯಕ್ತಿಕವಾಗಿದ್ದು, ಅವರ ಹೇಳಿಕೆಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಕ್ಷಿ ಮಹಾರಾಜ್ ಹೇಳಿಕೆಯನ್ನು ರಾಜ್ಯಸಭಾ ಸಂಸದ ಹುಸೈನ್ ದಲ್ವಾಯ್ (ಕಾಂಗ್ರೆಸ್) ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಸಾಕ್ಷಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ತಮ್ಮ ಹೇಳಿಕೆ ವಿರುದ್ಧ ಪ್ರತಿ ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿರುವುದರ ಹಿನ್ನೆಲೆಯಲ್ಲಿ ಎಚ್ಚೆತ್ತ ಸಾಕ್ಷಿ ಮಹಾರಾಜ್, ತಾವು ತಪ್ಪಾಗಿ ಹೇಳಿಕೆ ನೀಡಿದ್ದೇನೆ ಎನ್ನುವ ಮೂಲಕ ನುಣುಚಿಕೊಳ್ಳಲು ಯತ್ನಿಸಿದ್ದಾರೆ.