ಜೆಡಿಯು ಜತೆ ಮೈತ್ರಿ ಇಲ್ಲ ಎಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಭಾನುವಾರ ಹೇಳಿಕೆ ನೀಡಿದ ಬೆನ್ನಲ್ಲೇ, ಬಂಡೆದ್ದ ಆರ್ಜೆಡಿಯ ಮೂವರು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಜೆಡಿಯುನತ್ತ ಮುಖಮಾಡಿದ್ದಾರೆ.
'ಜೆಡಿಯು ಜತೆ ಮೈತ್ರಿ ಇಲ್ಲ. ಜೆಡಿಯು ಅಧ್ಯಕ್ಷ ಶರದ್ ಯಾದವ್ ಜತೆ ಮೈತ್ರಿ ಕುರಿತು ಮಾತುಕತೆ ನಡೆಸಿದ್ದೇನೆ ಎಂಬ ಸುದ್ದಿ ಆಧಾರ ರಹಿತವಾದುದು ಎಂದು ಲಾಲು ಪಟ್ನಾದಲ್ಲಿ ಭಾನುವಾರ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಜೆಡಿಯು ಶಾಸಕಾಂಗ ಪಕ್ಷದ ಸಭೆ ಬಳಿಕ, ಆರ್ಜೆಡಿ ಸಭೆ ನಡೆಸಲಿದ್ದು, ರಾಜ್ಯದ ಪರಿಸ್ಥಿತಿ ಕುರಿತು ಚರ್ಚೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ
ಏತನ್ಮಧ್ಯೆ, ಹಠಾತ್ ಬೆಳವಣಿಯಲ್ಲಿ ಆರ್ಜೆಡಿ ಶಾಸಕರಾದ ಸಾಮ್ರಾಟ್ ಚೌಧರಿ, ರಾಮ್ ಲಖನ್ ರಾಮ್ ರಮಣ್ ಮತ್ತು ಜಾವೇದ್ ಇಕ್ಬಾಲ್ ಅವರು ಸ್ಪೀಕರ್ ಉದಯ್ ನಾರಾಯಣ ಚೌಧರಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
'ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವಾಗ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತಹ ಸಣ್ಣ ತ್ಯಾಗ ಮಾಡದಿದ್ದರೆ ಹೇಗೆ. ನಿತೀಶ್ ಅವರ ಕೈಬಲಪಡಿಸಲು ನಾವು ಜೆಡಿಯು ಸೇರುತ್ತಿದ್ದೇವೆ’ ಎಂದು ರಾಜೀನಾಮೆ ಬಳಿಕ ಸಾಮ್ರಾಟ್ ಚೌಧರಿ ಪ್ರತಿಕ್ರಿಯಿಸಿದ್ದಾರೆ.