ದೇಶದ ಖ್ಯಾತ ಸಾಹಿತಿಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸರಕಾರಕ್ಕೆ ಹಿಂತಿರುಗಿಸುತ್ತಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ನಟಿ, ಬಿಜೆಪಿ ಸಂಸದೆ ಕಿರಣ್ ಖೇರ್ ಹೇಳಿದ್ದಾರೆ.
ಕಳೆದ 1984ರಲ್ಲಿ ದೆಹಲಿಯಲ್ಲಿ 3 ಸಾವಿರ ಸಿಖ್ಖರ ಮಾರಣಹೋಮ ನಡೆದಾಗ ಯಾರೊಬ್ಬ ಸಾಹಿತಿಯೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಾಪಸ್ ಮಾಡಿರಲಿಲ್ಲ. ಸಾಹಿತಿಗಳು, ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದು ರಾಜಕೀಯ ಪ್ರೇರಿತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ಸಾಹಿತಿಗಳು ಇದೀಗ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಯನ್ನು ಟೀಕಿಸುತ್ತಿರುವುದನ್ನು ನೋಡಿದಲ್ಲಿ ಇದು ರಾಜಕೀಯ ಪ್ರೇರಿತ ಎನ್ನುವುದು ಸ್ಪಷ್ಟವಾಗುತ್ತದೆ. ಶೀಘ್ರದಲ್ಲಿ ಇದರ ಹಿಂದಿರುವ ಸತ್ಯ ಬಹಿರಂಗವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿ ಕರಕುಶಲ ಇಲಾಖೆ ಆಯೋಜಿಸಿದ್ದ ಸೀರೆಗಳ ಪ್ರದರ್ಶನ ಕೇಂದ್ರವನ್ನು ಉದ್ಘಾಟಿಸಲು ಸಂಸದೆ ಕಿರಣ್ ಖೇರ್ ದೆಹಲಿಗೆ ಆಗಮಿಸಿದ್ದಾರೆ.
ನಿನ್ನೆ , ಸಂಸದೆ ಕಿರಣ್ ಖೇರ್ ಪತಿ ಅನುಪಮ್ ಖೇರ್ ಕೂಡಾ, ಸಾಹಿತಿಗಳು ಪ್ರಶಸ್ತಿ ವಾಪಸ್ ನೀಡುತ್ತಿರುವ ಹಿಂದೆ ರಾಜಕೀಯ ಅಡಗಿದೆ. ಪ್ರಧಾನಿ ಮೋದಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದರು.
ದಾದ್ರಿ ಹತ್ಯೆಯಂತಹ ಘಟನೆ ದೇಶದಲ್ಲಿ ಮೊದಲ ಬಾರಿ ನಡೆದಿಲ್ಲ. ಇಂತಹ ಹಲವಾರು ಹೇಯ ಘಟನೆಗಳು ನಡೆದಿವೆ. ಆದರೆ, ದಾದ್ರಿ ಘಟನೆಯನ್ನು ಮುಂದಿಟ್ಟುಕೊಂಡು ಸಾಹಿತಿಗಳು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದು ಸರಿಯಲ್ಲ ಎಂದು ಖೇರ್ ಅಭಿಪ್ರಾಯಪಟ್ಟರು.