ದಾದ್ರಿ ಹತ್ಯೆ ಪ್ರಕರಣಕ್ಕೆ ಮತ್ತಷ್ಟು ತುಪ್ಪ ಸುರಿಯುವ ಮಾತನಾಡಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ಗೋಮಾತೆ ರಕ್ಷಣೆಗೆ ನಾನು ಕೊಲ್ಲಲು ಮತ್ತು ಕೊಲೆಯಾಗಲೂ ಸಹ ತಯಾರಾಗಿದ್ದೇನೆ ಎಂದಿದ್ದಾರೆ.
'ನಮ್ಮ ತಾಯಿಗೆ ಅಪಮಾನವಾಗುವುದನ್ನು ನಾವು ಸಹಿಸಲಾರೆವು. ಆಕೆಯ ರಕ್ಷಣೆಗೆ ಸಾಯಲು ಮತ್ತು ಸಾಯಿಸಲು ಸಿದ್ಧ', ಎಂದಿರುವ ಮಹಾರಾಜ್, ದಾದ್ರಿ ಘಟನೆಗೆ ರಾಜಕೀಯ ಲೇಪ ಹಚ್ಚಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಘಟನೆಯನ್ನು ನಿರ್ವಹಿಸಲು ವಿಫಲವಾದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಮಹಾರಾಜ್, ಮೃತನ ಕುಟುಂಬಕ್ಕೆ ಅಖಿಲೇಶ್ ಯಾದವ್ ಸರ್ಕಾರ 45 ಲಕ್ಷ ಘೋಷಣೆ ಮಾಡಿರುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಉನ್ನಾವೋದಲ್ಲಿ ಎರಡು ಹೆಣ್ಣು ಮಕ್ಕಳು ಅತ್ಯಾಚಾರವಾಗಿ ಕೊಲೆಯಾದಾಗ ಅವರ ಕುಟುಂಬಕ್ಕೆ ಯಾವುದೇ ಪರಿಹಾರ ಘೋಷಿಸಿರಲಿಲ್ಲ ಎಂಬುದರ ಅರ್ಥವೇನು? ಎಂದು ಪ್ರಶ್ನಿಸಿದ್ದಾರೆ.
ಸಮಾಜವಾದಿ ನಾಯಕ ಆಜಂ ಖಾನ್ ವಿರುದ್ಧ ಸಹ ವಾಗ್ದಾಳಿ ನಡೆಸಿರುವ ಸಾಕ್ಷಿ ಮಹಾರಾಜ್, 'ಆಜಂ ಖಾನ್ ಪಾಕಿಸ್ತಾನಿ ಅವರು ಪಾಕಿಸ್ತಾನದ ರಾಜಕೀಯ ಶಕ್ತಿಗಳ ಮೇಲೆ ನಂಬಿಕೆಯನ್ನು ಹೊಂದಿದ್ದಾರೆ', ಎಂದು ಆರೋಪಿಸಿದ್ದಾರೆ.