ತಮ್ಮ ಹಿಂದೂತ್ವ ಅಜೆಂಡಾವನ್ನು ಮಂದುವರೆಸಿರುವ ರಾಜಸ್ಥಾನ್ ಸರ್ಕಾರ ಶಾಲಾ ಪಠ್ಯ ಪುಸ್ತಕವನ್ನು ಪರಿಷ್ಕರಿಸಿದ್ದು, ಅದರಲ್ಲಿ ಆಕಳು ವಿದ್ಯಾರ್ಥಿಗಳಿಗೆ ಪತ್ರ ಬರೆಯುವ ಒಂದು ಅಧ್ಯಾಯವನ್ನು ಸೇರಿಸಿದೆ.
ಐದನೆಯ ತರಗತಿ ಮಕ್ಕಳಿಗೆ ಪರಿಚಯಿಸಿರುವ ಹಿಂದಿ ಭಾಷಾ ಪುಸ್ತಕದಲ್ಲಿ ಈ ಪಾಠವನ್ನು ಸೇರಿಸಲಾಗಿದೆ. ಪಾಠದಲ್ಲಿ ದೊಡ್ಡ ಆಕಳ ಚಿತ್ರವಿದ್ದು, ಆ ಚಿತ್ರದ ಒಳಗೆ ಹಿಂದೂ ದೇವರುಗಳ ಚಿತ್ರವಿದೆ.
ಪತ್ರದಲ್ಲಿ ಆಕಳು ವಿದ್ಯಾರ್ಥಿಗಳನ್ನು ನನ್ನ ಮಕ್ಕಳೇ ಎಂದು ಸಂಬೋಧಿಸಿದ್ದು, ಪತ್ರ ಹೀಗೆ ಮುಂದುವರೆದಿದೆ, "ನಾನು ಪ್ರತಿಯೊಬ್ಬರಿಗೆ ಬಲ, ಬುದ್ಧಿವಂತಿಕೆ, ದೀರ್ಘಾಯುಷ್ಯ, ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡಿದ್ದೇನೆ. ನನ್ನ ಮಹತ್ವವನ್ನು ತಿಳಿದವರು ನನ್ನನ್ನು ತಾಯಿಯಂತೆ ಪರಿಗಣಿಸಿ. ನಾನು ಸಹ ನಿಮ್ಮನ್ನು ನನ್ನ ಮಕ್ಕಳಂತೆ ಪ್ರೀತಿಸುತ್ತೇನೆ".
ಪತ್ರದ ಮುಂದಿನ ಸಾಲಲ್ಲಿ ಆಕಳು ತನ್ನಿಂದಾಗುವ ಪ್ರಯೋಜನಗಳನ್ನು ಹೇಳಿಕೊಳ್ಳುವಂತೆ ಬರೆಯಲಾಗಿದೆ. "ನಾನು ಹಾಲು, ಬೆಣ್ಣೆ ಮತ್ತು ತುಪ್ಪದ ರೂಪದಲ್ಲಿ ಜೀವಾಮೃತವನ್ನು ಉತ್ಪಾದಿಸುತ್ತೇನೆ. ನನ್ನ ಮೂತ್ರ ಮತ್ತು ಸಗಣಿ ಔಷಧಿ, ಗೊಬ್ಬರ ಮತ್ತು ಕೀಟನಾಶಕವಾಗಿ ಉಪಯೋಗಿಸಲ್ಪಡುತ್ತದೆ. ನನ್ನ ಸಂತತಿ, ಹೋರಿ ಕೃಷಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ. ಉಸಿರಾಡುವ ಮೂಲಕ ನಾನು ಪರಿಸರವನ್ನು ಶುದ್ಧಗೊಳಿಸುತ್ತೇನೆ".
ಈ ಕುರಿತು ಪ್ರತಿಕ್ರಿಯಿಸಿರುವ ಗೋಪಾಲನ ಸಚಿವ ಒಟಾರಾಮ್ ದೇವಾಸಿ, ಇದು ಆಕಳ ಪ್ರಯೋಜನದ ಜಾಗೃತಿ ಮೂಡಿಸಲು ಕೈಗೊಂಡಿರುವ ಧನಾತ್ಮಕ ನಡೆ ಎಂದಿದ್ದಾರೆ.
ಈ ಅಧ್ಯಾಯವನ್ನು ಕೇವಲ ಓದಲು ಮಾತ್ರ ಅಳವಡಿಸಲಾಗಿದ್ದು ಪರೀಕ್ಷಾ ಪಠ್ಯದಲ್ಲಿ ಇದನ್ನು ಸೇರಿಸಲಾಗಿಲ್ಲ.