ಕೇಂದ್ರ ರೇಲ್ವೇ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಪುತ್ರ ಕಾರ್ತಿಕ್ ವಿರುದ್ಧ ನಟಿ ಮೈತ್ರಿಯಾ ಬೆಂಗಳೂರಿನ ಆರ್ಟಿನಗರ್ ಪೋಲಿಸ್ ಠಾಣೆಯಲ್ಲಿ ಅತ್ಯಾಚಾರದ ದೂರನ್ನು ದಾಖಲಿಸಿದ್ದಾರೆ.
ಅವರ ದೂರನ್ನು ಸ್ವೀಕರಿಸಿರುವ ಪೋಲಿಸರು ಇಂದು ಡಿವಿಕೆ ಪುತ್ರನನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
2014 ಜೂನ್ 5 ರಂದು ಮಂಗಳೂರಿನಲ್ಲಿರುವ ಅವರ ಮನೆಯಲ್ಲಿ ಕಾರ್ತಿಕ್ ನನಗೆ ತಾಳಿ( ಅರಿಶಿನ ಕೊಂಬಿನ ದಾರ) ಕಟ್ಟಿದ್ದರು. ನಂತರ ಬಲವಂತವಾಗಿ ನನ್ನ ಜತೆ ಲೈಂಗಿಕ ಸಂಪರ್ಕವನ್ನು ಮಾಡಿದ್ದರು. ಈಗ ನನಗೆ ಮೋಸ ಮಾಡಿರುವ ಅವರು ನನಗೆ ತಿಳಿಸದೇ ಇನ್ನೊಂದು ಮದುವೆಯಾಗಲು ಹೊರಟಿದ್ದಾರೆ ಅಂತಾ ಟೋಪಿವಾಲಾ ಚಿತ್ರದಲ್ಲಿ ನಟಿಸಿರುವ ನಟಿ ಮೈತ್ರಿಯಾ ಗೌಡ ಆರೋಪಿಸಿದ್ದಾರೆ.
ಮೈತ್ರಿಯಾಗೌಡ ನೀಡಿರುವ ದೂರಿನ ಪ್ರಕಾರ '' ಕಳೆದ ಮೇ ತಿಂಗಳಲ್ಲಿ ನನಗೆ ಪರಿಚಯ ಇರುವ ಕುಶಾಲ್ ಎಂಬ ವ್ಯಕ್ತಿ ಕಾಫಿ ಡೇನಲ್ಲಿ ಕಾರ್ತಿಕ್ ಗೌಡ ಅವರನ್ನು ಪರಿಚಯ ಮಾಡಿಸಿದರು. ಆ ಸಮಯದಲ್ಲಿ ನನ್ನ ಮನೆಯಲ್ಲಿ ಮದುವೆ ಮಾಡಲು ಗಂಡು ಹುಡುಕುತ್ತಿದ್ದರು. ಇಬ್ಬರೂ ಗೌಡ ಜಾತಿಗೆ ಸೇರಿದ್ದೀರಿ, ಒಪ್ಪಿಗೆಯಾದರೆ ಮದುವೆ ಮಾಡಿಕೊಳ್ಳಬಹುದು ಎಂದು ಕುಶಾಲ್ ಹೇಳಿದ್ದರು.
ಆಗ ಪ್ರಾರಂಭವಾದ ನಮ್ಮ ಸ್ನೇಹ ಸ್ವಲ್ಪ ದಿನದಲ್ಲಿ ಪ್ರೀತಿಗೆ ತಿರುಗಿತು. ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ನಾವು ಪ್ರೀತಿಸತೊಡಗಿದೆವು.
ಸ್ವಲ್ಪದಿನದ ತರುವಾಯ ಕಾರ್ತಿಕ್ ದೈಹಿಕ ಸಂಪರ್ಕಕ್ಕೆ ಪೀಡಿಸತೊಡಗಿದ. ಮದುವೆಗೆ ಮುಂಚೆ ಅದೆಲ್ಲಾ ಬೇಡ ಎಂದು ಹೇಳಿದರೂ ಆತ ಕೇಳಲಿಲ್ಲ. ಇದೆಲ್ಲ ಮದುವೆಯಾದ ಮೇಲೆ ಮಾತ್ರ ಎಂದು ನಾನು ಹೇಳಿದೆ. ಅದಕ್ಕೊಪ್ಪಿದ ಆತ ಮಂಗಳೂರಿನ ಅವರ ಮನೆಯಲ್ಲಿ ನನಗೆ ತಾಳಿ ಕಟ್ಟಿದ ಮತ್ತು ನನ್ನನ್ನು ಬಲವಂತವಾಗಿ ಬಳಸಿಕೊಂಡ .
ಆ ನಂತರ ಅನೇಕ ಬಾರಿ ಆತ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ. ಈಗ ನನಗೆ ಮೋಸ ಮಾಡಿ ಬೇರೆ ಹುಡುಗಿಯ ಜತೆ ಮದುವೆ ಮಾಡಿಕೊಳ್ಳುತ್ತಿದ್ದಾನೆ ಎಂದು ಮೈತ್ರಿಯಾ ದೂರು ನೀಡಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಇಂದು ಡಿವಿಎಸ್ ಪುತ್ರನನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮಾಹಿತಿ ಲಭಿಸಿದೆ.