ಸಂಸತ್ತಿನ ಬಜೆಟ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಅದಕ್ಕೆ ಚಕ್ಕರ್ ಹೊಡೆದು ರಜೆ ಮೇಲೆ ತೆರಳುತ್ತೇನೆಂದು ಹೇಳಿದ್ದ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದ್ದಾರೆಂದು ಭಾವಿಸಲಾಗಿತ್ತು. ಆದರೆ ರಾಹುಲ್ ಎಲ್ಲಿಯೂ ಹೋಗಿಲ್ಲ. ರಾಹುಲ್ ಭಾರತದಲ್ಲೇ ಉತ್ತರಾಖಂಡ್ನಲ್ಲಿ ಕ್ಯಾಂಪ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಎಐಸಿಸಿಯಿಂದ ಕೆಲವು ದಿನಗಳ ಕಾಲ ರಜೆ ಪಡೆದಿದ್ದ ರಾಹುಲ್ ಗಾಂಧಿ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಕಾಂಗ್ರೆಸ್ ನಾಯಕ ಜಗದೀಶ್ ಶರ್ಮಾ ಉತ್ತರಾಖಂಡದಲ್ಲಿ ರಾಹುಲ್ ತಂಗಿರುವ ಚಿತ್ರಗಳನ್ನು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ್ದು, ರಾಹುಲ್ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆಂದು ತಿಳಿಸಿದ್ದಾರೆ. ಆದರೆ ಜಗದೀಶ್ ಶರ್ಮಾ ಮಾಹಿತಿ ಸುಳ್ಳೆಂದು ರಾಹುಲ್ ಕಚೇರಿ ಸಿಬ್ಬಂದಿ ಮಾಹಿತಿ ನೀಡಿದೆ. ಶರ್ಮಾ ನೀಡಿರುವುದು 2008ರಲ್ಲಿ ಕ್ಲಿಕ್ಕಿಸಿದ ಫೋಟೋಗಳಾಗಿದ್ದು, ಉತ್ತರಾಖಂಡ್ನಲ್ಲಿರುವ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದ್ದಾರೆಂದು ಕಚೇರಿ ಸಿಬ್ಬಂದಿ ಹೇಳಿದೆ.
ರಾಹುಲ್ ಅವರನ್ನು ತೆಗೆದು ಪ್ರಿಯಾಂಕಾ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಗಾದಿ ನೀಡಬೇಕೆಂಬ ಕೂಗು ಕೇಳಿಬಂದಿರುವ ನಡುವೆ ರಾಹುಲ್ ಕಾಂಗ್ರೆಸ್ ಮುಖಂಡರ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಸಂಸತ್ತಿನ ಅಧಿವೇಶನದಲ್ಲೂ ಭಾಗವಹಿಸದೇ ನಾಪತ್ತೆಯಾಗಿದ್ದರು.