ಮಧ್ಯಪ್ರದೇಶ ವೃತ್ತಿಪರ ವೈದ್ಯಕೀಯ ಪರೀಕ್ಷೆ ಬೋರ್ಡ್ ಹಗರಣದ ಕುರಿತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕೆಗೆ ಮಾರುತ್ತರ ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನರೇಂದ್ರ ಸಿಂಗ್ ತೋಮರ್ ರಾಹುಲ್ ಗಾಂಧಿಗೆ ಭೃಷ್ಟಾಚಾರದ ಕುರಿತು ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಮೂರನೇ ಮತ್ತು ಅಂತಿಮ ಹಂತದ ಮತದಾನಕ್ಕೆ ಕೊನೆಯ ದಿನದ ಪ್ರಚಾರ ನಡೆಸುತ್ತ ಮಾತನಾಡುತ್ತಿದ್ದ ತೋಮರ್ "ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ಕುತ್ತಿಗೆ ಆಳದಷ್ಟು ವಿವಿಧ ವಂಚನೆಗಳಲ್ಲಿ ಮುಳುಗಿದೆ, ಹಾಗಾಗಿ ರಾಹುಲ್ ಗಾಂಧಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ಇತ್ತೀಚೆಗೆ ಎಮ್ಪಿಪಿಇಬಿ ಹಗರಣದಲ್ಲಿ ಬಿಜೆಪಿ ಸರ್ಕಾರದ ಪಾತ್ರವಿದೆ ಎಂದು ಆರೋಪಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕು ಎಂಬ ಕಾಂಗ್ರೆಸ ಬೇಡಿಕೆಯನ್ನು ತಿರಸ್ಕರಿಸಿದ ತೋಮರ್, ವಿಶೇಷ ಕಾರ್ಯಪಡೆ ತನ್ನ ಕೆಲಸವನ್ನು ಸಮರ್ಥವಾಗಿ ನಡೆಸುತ್ತಿದೆ ಎಂದು ಹೇಳಿದ್ದಾರೆ.