ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರನ್ನು ವಿಭಿನ್ನ ರೀತಿಯಲ್ಲಿ ಕಿಚಾಯಿಸಿದ್ದಾರೆ. ಮೋದಿಗಾಗಿ ಅವರು ತಮ್ಮ ಟ್ವಿಟರ್ನಲ್ಲಿ ಒಂದು ಪ್ರಾರ್ಥನೆಯನ್ನು ಪ್ರಕಟಿಸಿದ್ದಾರೆ- "ಅವರನ್ನು ಅಜ್ಞಾನದಿಂದ ಸತ್ಯದೆಡೆ ನಡೆಸು".
ಬ್ರಿಟಿಷ್ ಆಡಳಿತದ ಕಾಲದಲ್ಲಿ ಕಾಂಗ್ರೆಸ್ ಎದುರಿಸಿದ ಕಷ್ಟಗಳಿಗಿಂತ ಹೆಚ್ಚಿನ ಪ್ರತಿಕೂಲ ಸಂದರ್ಭಗಳನ್ನು ಬಿಜೆಪಿ ಸ್ವಾತಂತ್ರ್ಯೋತ್ತರದ ದಿನಗಳಲ್ಲಿ ಎದುರಿಸಿದೆ ಎಂಬ ಮೋದಿ ಮಾತುಗಳಿಗೆ ಪ್ರತಿಯಾಗಿ ರಾಹುಲ್ ಈ ಟ್ವೀಟ್ ಮಾಡಿದ್ದಾರೆ.
"ಮೋದಿಜೀ ನಿಮಗಾಗಿ ಪ್ರಾರ್ಥನೆ: ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂ ಗಮಯಾ ಓಂ ಶಾಂತಿ ಶಾಂತಿ", ಉಪನಿಷದ್ನಲ್ಲಿ ಕಂಡು ಬರುವ ಶ್ಲೋಕವನ್ನು ರಾಹುಲ್ ಪ್ರಕಟಿಸಿದ್ದಾರೆ.
"ನನ್ನನ್ನು ಅಜ್ಞಾನದಿಂದ ಸತ್ಯದೆಡೆ ನಡೆಸು " - ಕತ್ತಲೆಯಿಂದ ಬೆಳಕಿನೆಡೆ - ಸಾವಿನಿಂದ ಅಮರತ್ವದ ಕಡೆಗೆ. ಎಲ್ಲ ಜೀವಸೃಷ್ಟಿಗಳಿಗೂ ಶಾಂತಿ ಸಿಗಲಿ" - ಎಂಬುದು ಈ ಶ್ಲೋಕದ ಭಾವಾರ್ಥ. ಇದನ್ನು ಸಹ ರಾಹುಲ್ ಪ್ರಕಟಿಸಿದ್ದಾರೆ.
ಈ ಹೇಳಿಕೆಯನ್ನು ನೀಡುವುದರ ಮೋದಿ ಅವರು ಸ್ವಾತಂತ್ರ ಹೋರಾಟಗಾರರಿಗೆ ಅಪಮಾನ ಮಾಡಿದ್ದಾರೆ. ಅವರು ಕ್ಷಮೆಯಾಚಿಸಬೇಕು ಎಂದು ಎಐಸಿಸಿ ವಕ್ತಾರ ಆನಂದ ಶರ್ಮಾ ಆಗ್ರಹಿಸಿದ್ದಾರೆ.