ಉತ್ತರ ಭಾರತದಲ್ಲಿ ನಡೆದ ಪ್ರಬಲ ಭೂಕಂಪದ ವಿವರ ಪಡೆದುಕೊಳ್ಳಲು ಪ್ರಧಾನಿ ಮೋದಿ ಬಿಹಾರ್, ಉತ್ತರ ಪ್ರದೇಶ್ ಮತ್ತು ಸಿಕ್ಕಿಂ ಮುಖ್ಯಮಂತ್ರಿಗಳಿಗೆ ಫೋನ್ ಕರೆ ಮಾಡಿ ಮಾತನಾಡಿದ್ದಾರೆ.
ಭಾರತ ಮತ್ತು ನೇಪಾಳದಲ್ಲಿ ಪ್ರಕೃತಿ ವಿಕೋಪದಿಂದಾಗಿರುವ ಅನಾಹುತದ ಮಾಹಿತಿ ಪಡೆಯಲು ಮತ್ತು ಅದರ ಪರಿಣಾಮವನ್ನು ಅನುಭವಿಸುತ್ತಿರುವರನ್ನು ತಲುಪಲು ನಾವು ತ್ವರಿತಗತಿಯಲ್ಲಿ ಪ್ರಯತ್ನಿಸುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಟ್ವೀಟ್ ತಿಳಿಸುತ್ತದೆ.
ಉತ್ತರ ಭಾರತ ಮತ್ತು ನೆರೆಯ ದೇಶದಲ್ಲಿ ಇಂದು ಮಧ್ಯಾಹ್ನ ತೀವೃ ಪ್ರಮಾಣದ ಭೂಕಂಪ ಸಂಭವಿಸಿದ್ದು ನೇಪಾಳದಲ್ಲಿ 100 ಕ್ಕೂ ಹೆಚ್ಚು ಮತ್ತು ಭಾರತದಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕರ್ನಾಟಕದಿಂದ ನೇಪಾಳಕ್ಕೆ ಪ್ರವಾಸಕ್ಕೆ ಹೋದ ಸುಮಾರು 32 ಜನರು ಸಹ ಸಂಪರ್ಕಕ್ಕೆ ಸಿಗುತ್ತಿಲ್ಲ.
ಪ್ರಧಾನಿಯವರು ನೇಪಾಳದ ರಾಷ್ಟ್ರಪತಿ ರಾಮ್ ಭರಣ್ ಯಾದವ್ ಮತ್ತು ಪ್ರಧಾನಿ ಶ್ರೀ ಸುಶೀಲ್ ಕೊಯಿರಾಲ ಅವರ ಜತೆ ಸಹ ಮಾತನಾಡಿರುವ ಪ್ರಧಾನಿ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಿಸಿದ ಟ್ವಿಟರ್ ತಿಳಿಸುತ್ತದೆ.