ಅಳಿಯನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎನ್ನುವ ಸಂಶಯದಿಂದ ಪತಿ ಮಹಾಶಯ, ಪತ್ನಿಯ ರುಂಡಕಡಿದಿದ್ದಲ್ಲದೇ ರುಂಡವನ್ನು ಎತ್ತಿಕೊಂಡು ನಗರದ ರಸ್ತೆಯಲ್ಲಿ ತಿರುಗುತ್ತಿರುವಾಗ ಪೊಲೀಸರು ಬಂಧಿಸಿದ್ದಾರೆ.
ಕಟ್ರಾಜ್ನ ಗಂಗಾ ಓಸಿಯನ್ ಪಾರ್ಕ್ ಬಳಿಯಿರುವ ರಸ್ತೆಯಲ್ಲಿ ಒಂದು ಕೈಯಲ್ಲಿ ಮಚ್ಚು ಮತ್ತೊಂದು ಕೈಯಲ್ಲಿ ರುಂಡ ಹಿಡಿದು ತಿರುಗುತ್ತಿದ್ದ ವ್ಯಕ್ತಿ ಆರೋಪಿ ರಾಮಚಂದ್ರ ಶೇವು ಚವ್ಹಾಣ್ ಎಂದು ಗುರುತಿಸಲಾಗಿದೆ.
ಗಂಗಾ ಓಸಿಯನ್ ಪಾರ್ಕ್ ಬಳಿಯಿರುವ ಒಸ್ವಾಲ್ ಪ್ಲಾಟ್ನಲ್ಲಿ ವಾಸಿಸುತ್ತಿದ್ದ 53 ವರ್ಷ ವಯಸ್ಸಿನ ರಾಮಚಂದ್ರ ಶೇವು ಚವ್ಹಾಣ್, ತನ್ನ 45 ವರ್ಷ ವಯಸ್ಸಿನ ಪತ್ನಿ ಸೋನಾಬಾಯಿ ರಾಮಚಂದ್ರ ಚವ್ಹಾಣ್ಳನ್ನು ಹತ್ಯೆ ಮಾಡಿದ್ದಾನೆ ಎಂದು ಸೋನಾಬಾಯಿ ಚವ್ಹಾಣ್ ಸೊಸೆ ಸುನೀತಾ ರಾಜೇಶ್ ಚೌವ್ಹಾಣ್, ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯಲ್ಲಿ ಆರೋಪಿ ಮಾವನ ವಿರುದ್ಧ ದೂರು ದಾಖಲಿಸಿದ್ದಾಳೆ.
ಗುಲ್ಬರ್ಗಾ ಮೂಲದವನಾದ ಚವ್ಹಾಣ್, ಕಳೆದ 40 ವರ್ಷಗಳಿಂದ ಪುಣೆಯಲ್ಲಿ ವಾಸವಾಗಿದ್ದ. ಒಸ್ವಾಲ್ ಫ್ಲಾಟ್ನಲ್ಲಿ ವಾಚ್ಮೆನ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇಬ್ಬರು ಪುತ್ರರಾದ ರಾಜೇಶ್ ಮತ್ತು ಉಮೇಶ್, ಸೊಸೆ ಸುನೀತಾ ಮತ್ತು ಇಬ್ಬರು ಮೊಮ್ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ. ಇಬ್ಬರು ಪುತ್ರಿಯರಿಗೆ ವಿವಾಹ ಮಾಡಿಕೊಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪತ್ನಿ ಸೋನಾಬಾಯಿ ತನ್ನ ಅಳಿಯನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎನ್ನುವ ಸಂಶಯದಿಂದ ಆರೋಪಿ ಚವ್ಹಾಣ್, ತನ್ನ ಪತ್ನಿಯೊಂದಿಗೆ ಪ್ರತಿನಿತ್ಯ ಜಗಳವಾಡುತ್ತಿದ್ದ ಎನ್ನಲಾಗಿದೆ. ಕಳೆದ ಶುಕ್ರವಾರದಂದು ಪುತ್ರರಾದ ರಾಜೇಶ್ ಮತ್ತು ಉಮೇಶ್ ಕೆಲಸಕ್ಕಾಗಿ ತೆರಳಿದ ನಂತರ ಪತ್ನಿಯೊಂದಿಗೆ ವಾಗ್ವಾದ ಆರಂಭಿಸಿದ್ದಾನೆ, ಇಬ್ಬರ ಜಗಳ ತಡೆಯಲು ಮಧ್ಯಪ್ರವೇಶಿಸಿದ ಸೊಸೆ ಸುನೀತಾ ಮತ್ತು ಇಬ್ಬರು ಮೊಮ್ಮಕ್ಕಳನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ, ಮಚ್ಚಿನಿಂದ ತನ್ನ ಪತ್ನಿಯ ರುಂಡವನ್ನು ಕತ್ತರಿಸಿ ಹಾಕಿದ್ದಾನೆ.
ಕೋಪದ ಭರದಲ್ಲಿ ಒಂದು ಕೈಯಲ್ಲಿ ಮಚ್ಚು ಮತ್ತೊಂದು ಕೈಯಲ್ಲಿ ಪತ್ನಿಯ ರುಂಡವನ್ನು ಹಿಡಿದು ರಸ್ತೆಯಲ್ಲಿ ತಿರುಗಲು ಆರಂಭಿಸಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿ ರಾಮಚಂದ್ರನನ್ನು ಬಂಧಿಸಿ ಆತನ ಪತ್ನಿ ಸೋನಾಬಾಯಿ ಶವವನ್ನು ಪೋಸ್ಟ್ ಮಾರ್ಟಂಗಾಗಿ ರವಾನಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.