ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರನ್ನು ಭೇಟಿ ಮಾಡಿದ ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಪ್ರಶಾಂತ್ ಭೂಷಣ್ ಭೂ ಸ್ವಾಧೀನ ಮಸೂದೆ ಮತ್ತು ಒನ್ ರ್ಯಾಂಕ್ ಒನ್ ಪೆನ್ಶನ್ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೈ ಕಿಸಾನ್ ಅಂದೋಲನ ರ್ಯಾಲಿಗೆ ಬೆಂಬಲ ಸೂಚಿಸಿದ್ದಕ್ಕಾಗಿ ಹಜಾರೆಯವರಿಗೆ ಧನ್ಯವಾದಗಳನ್ನು ಅರ್ಪಿಸಲು ಬಂದಿದ್ದೇನೆ. ಆಗಸ್ಟ್ 19 ರಂದು ನಡೆಯಲಿರುವ ಕಿಸಾನ್ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದೇನೆ ಎಂದು ಭೂಷಣ್ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದಿಂದ ಉಚ್ಚಾಟಿಸಿದ ನಂತರ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ , ಆನಂದ್ ಕುಮಾರ್ ಮತ್ತು ಅಜಿತ್ ತ್ಯಾಗಿ ಸ್ವರಾಜ್ ಅಭಿಯಾನ್ ಸಂಘಟನೆಯನ್ನು ಆರಂಭಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮನೀಷ್ ಸಿಸೋಡಿಯಾರನ್ನು ಹಜಾರೆ ಭೇಟಿ ಮಾಡಿದ ಒಂದು ದಿನದ ನಂತರ ಪ್ರಶಾಂತ್ ಭೂಷಣ್ ಹಜಾರೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಜನಲೋಕಪಾಲ್ ಮಸೂದೆ ಜಾರಿಗೊಳಿಸುವಂತೆ ಹೋರಾಟ ನಡೆಸಿದ ಸಂದರ್ಭದಲ್ಲಿ ಪ್ರಶಾಂತ್ ಭೂಷಣ್ ಅವರ ತಂದೆ ಶಾಂತಿ ಭೂಷಣ್ ಮತ್ತು ಕೇಜ್ರಿವಾಲ್ ಕೋರ್ ಕಮಿಟಿಯ ಸದಸ್ಯರಾಗಿದ್ದರು.
ನಿನ್ನೆ ಕೇಜ್ರಿವಾಲ್ರನ್ನು ಭೇಟಿಯಾಗಿದ್ದ ಹಜಾರೆ, ಹಳೆಯ ಮಿತ್ರರಾದ ಭೂಷಣ್ ಮತ್ತು ಯಾದವ್ರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದರು.